ಕರ್ನಾಟಕ

ವಿಶಾಖಪಟ್ಟಣದ ಯುವಕನಿಂದ ಬೆಂಗಳೂರಿನ ಬಾಲಕನಿಗೆ ಹೃದಯ!

Pinterest LinkedIn Tumblr


ಬೆಂಗಳೂರು: ವಿಶಾಖಪಟ್ಟಣಂನಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೋರ್ವನ ಹೃದಯವನ್ನು ಬೆಂಗಳೂರಿನ ಬಾಲಕನಿಗೆ ಜೋಡಿಸಲಾಗಿದೆ.

ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನಕ್ಕೆ ಮನೆಯವರು ಸಮ್ಮತಿಸಿದ್ದರು. ಕೂಡಲೇ ಬೆಂಗಳೂರಿನ ಬನ್ನೇರುಘಟ್ಟದಲ್ಲಿನ ಪೋರ್ಟಿಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನೋರ್ವನಿಗೆ ಹೃದಯದ ಅವಶ್ಯಕತೆಯಿದ್ದರಿಂದ ರಾತ್ರಿಯೇ ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಹೃದಯ ರವಾನಿಸಲಾಯಿತು.

ವಿಶಾಖಪಟ್ಟಣಂನಿಂದ ರಾತ್ರಿ 9.30ಕ್ಕೆ ವಿಮಾನದ ಮೂಲಕ ಹೃದಯವನ್ನು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಬಳಿಕ ಅಲ್ಲಿಂದ ಫೋರ್ಟಿಸ್‌ ಆಸ್ಪತ್ರೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿ ಆಂಬುಲೆನ್ಸ್ ಮೂಲಕ 45 ಕಿ.ಮೀ. ದೂರವನ್ನು 45 ನಿಮಿಷದಲ್ಲಿ ತಲುಪಲಾಯಿತು.

ಫೋರ್ಟಿಸ್ ಆಸ್ಪತ್ರೆಯಲ್ಲಿ 13 ವರ್ಷದ ಬಾಲಕನಿಗೆ ಕೂಡಲೇ ಹೃದಯ ಕಸಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Comments are closed.