ಕರ್ನಾಟಕ

ಬಾಡಿಗೆ ಕಾರು ಪಡೆದು ದರೋಡೆ ಮಾಡುತ್ತಿದ್ದ ಕಳ್ಳರ ಬಂಧನ

Pinterest LinkedIn Tumblr


ಬೆಂಗಳೂರು: ಸ್ವಯಂ ಚಾಲನೆಗಾಗಿ ಬಾಡಿಗೆಗೆ ಸಿಗುವ ಜೂಮ್‌ ಕಾರ್‌ ತೆಗೆದುಕೊಂಡು ರಾತ್ರಿ ವೇಳೆ ನಗರದಲ್ಲಿ ಒಂಟಿಯಾಗಿ ಓಡಾಡುವರನ್ನು ಅಡ್ಡಗಟ್ಟಿ, ಬೆದರಿಸಿ ದರೋಡೆ, ಸುಲಿಗೆ ಮಾಡುತ್ತಿದ್ದ ಏಳು ಜನ ದರೋಡೆಕೋರರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಲೇಔಟ್‌ ನಿವಾಸಿಗಳಾದ ಮಧುಸೂದನ್‌(22), ಹರೀಶ್‌ (21), ಅಭಿಷೇಕ್‌ (21), ಪ್ರಕಾಶ್‌ (20), ಪ್ರವೀಣ್‌(21), ರಾಹುಲ್‌(21) ಮತ್ತು ಕಿಶೋರ್‌ (18) ಬಂಧಿತರು. ಆರೋಪಿಗಳಿಂದ 26.84 ಲಕ್ಷ ರೂ. ಮೌಲ್ಯದ ಎರಡು ಕಾರುಗಳು, ಚಿನ್ನಾಭರಣ ಮತ್ತು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಾಜಾಜಿ ನಗರ ಕೆಎಲ್‌ಇ ಕಾಲೇಜು ಬಳಿಯ ಮೈದಾನದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿಗಳು ಕಳ್ಳತನ ಮಾಡಿದ ಮೊಬೈಲ್‌ ಫೋನ್‌ಗಳಿಂದಲೇ ಜೂಮ್‌ ಕಾರು ಬುಕ್‌ ಮಾಡುತ್ತಿದ್ದರು. ನಂತರ ಡಿಎಲ್‌ ಪ್ರತಿ ನೀಡಿ ವಾಹನ ಬಾಡಿಗೆ ಪಡೆದುಕೊಂಡು ನಗರದ ನಾನಾ ಭಾಗಗಳಲ್ಲಿ ಸುತ್ತಾಡಿಕೊಂಡು ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ರಾಜಾಜಿನಗರ 3ನೇ ಬ್ಲಾಕ್‌ಗೆ ನಸುಕಿನಲ್ಲಿ ಬಂದಿಳಿದಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಸಂಜಯ್‌ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಅವರಿಂದ 3 ಸಾವಿರ ರೂ. ದೋಚಿ ಪರಾರಿಯಾಗಿದ್ದರು. ಈ ಸಂಬಂಧ ರಾಜಾಜಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನದಿಂದ ರಾಜಾಜಿ ನಗರ, ಜಾಲಹಳ್ಳಿ, ಚಂದ್ರ ಲೇಔಟ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ, ಸುಲಿಗೆ ಮತ್ತು ದರೋಡೆ ಪ್ರಕರಣಗಳು ಪತ್ತೆಯಾಗಿವೆ. ತಂಡದಲ್ಲಿರುವ ಇನ್ನೂ ಕೆಲ ಆರೋಪಿಗಳ ಬಂಧನವಾಗಬೇಕಿದೆ ಎಂದು ರಾಜಾಜಿನಗರ ಪೊಲೀಸರು ತಿಳಿಸಿದ್ದಾರೆ.

Comments are closed.