ನರಗುಂದ: ಜೀವ ಜಲಕ್ಕಾಗಿ 3 ವರ್ಷಗಳಿಂದ ಹೋರಾಡುತ್ತಿರುವ ಮಹದಾಯಿ ಹೋರಾಟಗಾರರು ಇಂದು ಮಾಡು ಇಲ್ಲವೇ ಮಡಿಗೆ ಸಿದ್ಧರಾಗಿದ್ದಾರೆ. ದಯಾಮರಣಕ್ಕೆ ಅನುಮತಿ ಕೋರಿ ನೂರಾರು ರೈತರು, ರೈತ ಮಹಿಳೆಯರು ರಾಷ್ಟ್ರಪತಿಗಳಿಗೆ ಅರ್ಜಿ ರವಾನಿಸಿದ್ದಾರೆ.
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಸುದೀರ್ಘ ಸತ್ಯಾಗ್ರಹ 3 ವರ್ಷ ಪೂರೈಸಿ 1097ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ವೇದಿಕೆ ಸಾಕ್ಷಿಯಾಯಿತು.
ಏ.30ರಂದು 223 ರೈತರು ದೆಹಲಿ ಚಲೋ ಮೂಲಕ ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು. ಜು.12ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಪಿಐಎಲ್ ಹಾಕಿದ್ದು, ಭಾನುವಾರ ಸಮನ್ವಯ ಸಮಿತಿ ಸಭೆ ನಿರ್ಣಯದಂತೆ ಸೋಮವಾರ ಮಹದಾಯಿ ವೇದಿಕೆಯಲ್ಲಿ ಮಠಾಧೀಶರು, ನೂರಾರು ರೈತರು ದಯಾಮರಣಕ್ಕೆ ಅನುಮತಿ ಕೋರುವ ಅರ್ಜಿಗೆ ಸ್ವಯಂ ಪ್ರೇರಣೆಯಿಂದ ರುಜು ಹಾಕಿದರು. ವೇದಿಕೆ ಸಭೆ ಬಳಿಕ ನೆರೆದಿದ್ದ ಮಠಾಧೀಶರ ನೇತೃತ್ವದಲ್ಲಿ ಅಂಚೆ ಕಚೇರಿಗೆ ತೆರಳಿದ ರೈತರು, ರೈತ ಮಹಿಳೆಯರು ಅಂಚೆ ಡಬ್ಬಿಗೆ ದಯಾಮರಣ ಅರ್ಜಿ ಹಾಕುವ ಮೂಲಕ ರಾಷ್ಟ್ರಪತಿಗಳಿಗೆ ರವಾನಿಸಿದರು. ಮಾಹಿತಿ ಪ್ರಕಾರ 683 ಅರ್ಜಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
– ಸಿದ್ಧಲಿಂಗಯ್ಯ ಮಣ್ಣೂರಮಠ
Comments are closed.