
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಾಲ ಮನ್ನಾ ನಮ್ಮ ಸರ್ಕಾರದ ಬದ್ಧತೆಯಾಗಿತ್ತು. ಅದನ್ನು ಈಡೇರಿಸಲಿದ್ದೇವೆ ಎಂದರು.
ಇದೇ ವೇಳೆ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿದ ಸಿಎಂ, ಒಂದು ಲಕ್ಷ ರುಪಾಯಿ ವರರೆಗಿನ ಚಾಲ್ತಿ ಬೆಳೆಸಾಲ ಮನ್ನಾ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ 10,700 ಕೋಟಿ ರುಪಾಯಿ ಹೊರೆಯಾಗಲಿದೆ ಎಂದರು.
ಈಗಾಗಲೇ ರಾಷ್ಟ್ರೀಕೃತ, ಸಹಕಾರಿ, ಕಿಸಾನ್ ಕಾರ್ಡ್ಗಳ 2 ಲಕ್ಷದ ವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡಲಾಗಿದ್ದು, ಚಾಲ್ತಿ ಸಾಲದ ರೈತರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈಗ ರೈತರ ಚಾಲ್ತಿ ಸಾಲವನ್ನೂ ಮನ್ನಾ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಇದು ಸಹಕಾರಿ ವಲಯದ ಸಾಲಗಳಿಗೆ ಮಾತ್ರವೇ ಅನ್ವಯಿಸಲಿದ್ದು, ರಾಷ್ಟ್ರೀಕೃತ ಬ್ಯಾಂಕು ಅಥವಾ ಕಿಸಾನ್ ಕಾರ್ಡ್ಗೆ ಅನ್ವಯಿಸುವುದಿಲ್ಲ.
ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ ಅಕ್ಕಿಯ ಪ್ರಮಾಣವನ್ನು 7 ಕೆಜಿಯೇ ಮುಂದುವರೆಸಿಕೊಂಡು ಹೋಗುವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವನ್ನು ಹಿಂಪಡೆಯುವುದಿಲ್ಲ ಎಂದು ಕುಮಾರಸ್ವಾಮಿ, ಜೀವ ಬೇಕಾದರೂ ಕೊಟ್ಟು ರೈತರ ಪ್ರಾಣ ಕಾಪಾಡುತ್ತೇನೆ ಎಂದರು.
ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ ಅವರು, ಸಾಲ ಮನ್ನಾದಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಲಾಭ ಆಗಿದೆ. ಬೆಳಗಾವಿ ವಲಯದ 9501 ಕೋಟಿ ಸಾಲಮನ್ನಾ ಆಗುತ್ತೆ, ಬೆಂಗಳೂರು ವಲಯದ 7454 ಕೋಟಿ, ಕಲಬುರಗಿ ವಲಯದ 5651 ಕೋಟಿ, ಮೈಸೂರು ವಲಯದ 6760 ಕೋಟಿ, ಒಟ್ಟು 29279 ಕೋಟಿ ಮನ್ನಾ ಆಗುತ್ತೆ ಎಂದು ಲೆಕ್ಕ ನಿಡಿದರು.
ಸಿಎಂ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಈಗ ಕೇವಲ ಆರೂವರೆ ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳುವ ಮೂಲಕ ನಾಡಿನ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
ಬಿಜೆಪಿ ಸಭಾತ್ಯಾಗದ ಮಧ್ಯೆಯೇ ನಾಲ್ಕು ವಿಧೇಯ ಅಂಗೀಕಾರ
ಕರ್ನಾಟಕ ಧನವಿನಿಯೋಗ ವಿಧೇಯಕ
ಮೋಟಾರು ವಾಹನಗಳ ತೆರಿಗೆ ವಿಧೇಯಕ
ಕರ್ನಾಟಕ ಮೌಲ್ಯವರ್ಧಿತ ತೆರಿಗೆ ವಿಧೇಯಕ
ಕರ್ನಾಟಕ ವಿದ್ಯುಚ್ಛಕ್ತಿ ವಿಧೇಯಕಗಳಿಗೆ ವಿಧಾನಸಭೆ ಅಂಗೀಕಾರ ನೀಡಿದೆ.
ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿ ಬದಲಿಗೆ 5 ಕೆಜಿ ನೀಡಲಾಗುತ್ತದೆ ಎಂದಿದ್ದ ಸಿಎಂ ಅವರ ನಿರ್ಣಯಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ನಿರ್ಣಯವನ್ನು ಕುಮಾರಸ್ವಾಮಿ ಹಿಂಪಡೆದಿದ್ದು ಅನ್ನಭಾಗ್ಯ ಅಕ್ಕಿಗೆ ಹಾಕಿದ್ದ ಖನ್ನ ವಾಪಸ್ ಪಡೆಯಲಾಗಿದೆ.
ಕರ್ನಾಟಕ
Comments are closed.