ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರದಿಂದ ಯಾವುದೇ ನೆರವು ಸಿಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರ ಅಧಿಕಾರದಲ್ಲಿರುವ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಈ ರಾಜ್ಯಗಳ ರೈತರ ಸಾಲ ಮನ್ನಾಕ್ಕೆ ಕೇಂದ್ರ ಸರಕಾರ ಒಂದು ಪೈಸೆಯಷ್ಟು ನೆರವು ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಆರ್ಥಿಕ ಇತಿಮಿತಿಗಳನ್ನು ಅರಿತು ರೈತರ ಸಾಲ ಮನ್ನಾ ಘೋಷಣೆ ಮಾಡಬೇಕಿತ್ತು ಎಂದು ವಿವರಿಸಿದ್ದಾರೆ.
ರೈತರ ಸಾಲ ಮನ್ನಾದ ಶೇ.50ರಷ್ಟು ಹಣ ನೀಡುವಂತೆ ಮೋದಿಗೆ ಎಚ್ಡಿಕೆ ಮನವಿ
ಸಿಎಂ ಬಜೆಟ್ ಮಂಡನೆ ಮಾಡುವವರೆಗೂ ಕಾಯುತ್ತೇವೆ. ಅಲ್ಲಿಯವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದೇನೆ. ಬಜೆಟ್ ಬಳಿಕ ನಮ್ಮ ಹೋರಾಟದ ರೂಪುರೇಷಗಳು ಯಾವ ರೀತಿ ಇರುತ್ತದೆ ಎಂದು ತಿಳಿಸುತ್ತೇವೆ ಎಂದರು.
ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕುಮಾರಸ್ವಾಮಿ ಅವರು, ಬಜೆಟ್ ಮಂಡನೆಗೂ ಮುನ್ನ ತಮ್ಮ ಪ್ರಣಾಳಿಕೆಯನ್ನು ಇನ್ನೊಮ್ಮೆ ಓದಿಕೊಳ್ಳಲಿ ಎಂದು ಚಾಟಿ ಬೀಸಿದರು. .
ಇನ್ನು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಹುದ್ದೆಗೆ ಬಿ ಜೆ ಪುಟ್ಟಸ್ವಾಮಿ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಲು ಬಿಎಸ್ವೈ ನಿರಾಕರಿಸಿದರು.
Comments are closed.