ಮಂಡ್ಯ: ವಿಷ ಸೇವಿಸಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿ, ಆಕೆಯ ಸಾವಿಗೆ ಕಾರಣವಾಗಿರುವುದಲ್ಲದೆ ಪೋಷಕ ರಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ತಾಲೂಕು ಲಕ್ಷ್ಮೇಗೌಡನ ದೊಡ್ಡಿ ಗ್ರಾಮಸ್ಥರು ಗುರುವಾರ ನಗರದ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೊದಲನೇ ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಭವಾನಿ (17)ಸಾವಿಗೀಡಾದ ಯುವತಿ. ಈಕೆ ಚಿಕ್ಕತಮೆ ಗೌಡ- ಸವಿತಾ ದಂಪತಿ ಪುತ್ರಿ. ಭವಾನಿ ತನ್ನ ಅಜ್ಜಿ ಮನೆಯಾದ ಬಿದರಹಳ್ಳಿಯಿಂದ ಮಂಡ್ಯಕ್ಕೆ ವ್ಯಾಸಂಗಕ್ಕೆ ಬರುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದ ಭವಾನಿಗೆ ಪ್ಯಾರಾ ಮೆಡಿಕಲ್ಗೆ ಸೇರುವುದು ಇಷ್ಟವಿರಲಿಲ್ಲ. ಪೋಷಕರು ಒತ್ತಡ ಹಾಕಿ ಬಲವಂತದಿಂದ ಆಕೆಯನ್ನು ಪ್ಯಾರಾ ಮೆಡಿಕಲ್ಗೆ ಸೇರಿಸಿದ್ದರು. ಇದರಿಂದ ಭವಾನಿ ಬೇಸರಗೊಂಡಿದ್ದಳು ಎನ್ನಲಾಗಿದೆ. ಮೇ 26ರ ಶನಿವಾರ ಕಾಲೇಜಿಗೆ ಹೋಗಿಬರುವುದಾಗಿ ಮನೆಯಿಂದ ಭವಾನಿ ಹೊರಟಿದ್ದಾಳೆ. ಬಿದರಹಳ್ಳಿಯಿಂದ ಬರುವ ರಸ್ತೆಯಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ.
ಸ್ನೇಹಿತೆಯರು ಕುಟುಂಬಕ್ಕೆ ವಿಷಯ ಮುಟ್ಟಿಸಿ, ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದರು. ಪ್ರಥಮ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಗುರುವಾರ ಬೆಳಗ್ಗೆ ಭವಾನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಪೋಷ
ಕರು ಆಕ್ರೋಶ ವ್ಯಕ್ತಪಡಿಸಿ, ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆಯಿತು.
ಗ್ರಾಮಾಂತರ ಠಾಣೆ ಪೊಲೀಸ್ ಬಲದೊಂದಿಗೆ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತಂದು ಶವಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಲಾಯಿತು.
Comments are closed.