ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮತ್ತೂಮ್ಮೆ ರಿಲೀಫ್ ಸಿಕ್ಕಿದೆ. ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಡಳಿತಾತ್ಮಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲವೆಂದಿದೆ. ಜತೆಗೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯೇ ವಿಚಾರಣೆ ನಡೆಸಲಿ. ಅದು ಅಂತಿಮ ಆದೇಶ ನೀಡುವ ತನಕ ಸಿಂಧೂರಿ ಅವರು ಹಾಸನ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಯಲಿ ಎಂದು ಆದೇಶ ನೀಡಿದೆ.
ವರ್ಗಾವಣೆ ಪ್ರಕರಣವನ್ನು ಸರಕಾರಕ್ಕೆ ಕಳುಹಿಸಿದ್ದ ಸಿಎಟಿ ನಿರ್ದೇಶನ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ಇತ್ಯರ್ಥಗೊಳಿಸಿದ ಮುಖ್ಯ ನ್ಯಾ| ದಿನೇಶ್ ಮಹೇಶ್ವರಿ ಹಾಗೂ ನ್ಯಾ| ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಧಿಕಾರಿಯ ವರ್ಗಾವಣೆ ಆಡಳಿತಾತ್ಮಕ ವಿಚಾರವಾಗಿರುವುದ ರಿಂದ ಹೈಕೋರ್ಟ್ ಮಧ್ಯ ಪ್ರವೇಶಿ ಸುವುದಿಲ್ಲ. ಹೀಗಾಗಿ, ಅಧಿಕಾರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಎ. 2ರಂದು ಸಿಎಟಿಯೇ ನಡೆಸಬೇಕು. ಈ ಸಂದರ್ಭದಲ್ಲಿ ಅಧಿಕಾರಿ ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಸರಕಾರ ಹಾಗೂ ಅಧಿಕಾರಿಯ ಪರ ವಾದ- ಪ್ರತಿವಾದ ಆಲಿಸಿದ ಬಳಿಕ ಸಿಎಟಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು. ಜತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಟಿ ಅಂತಿಮ ಆದೇಶ ನೀಡುವ ತನಕ ಅಧಿಕಾರಿ ಹಾಸನ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಯಲಿದ್ದಾರೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
-ಉದಯವಾಣಿ
Comments are closed.