ಕರ್ನಾಟಕ

ಅಣ್ಣಾ ಹಜಾರೆ ನೇತೃತ್ವದಲ್ಲಿ ದಿಲ್ಲಿಯಲ್ಲಿ ರೈತರ ಬೃಹತ್ ರ‍್ಯಾಲಿ

Pinterest LinkedIn Tumblr


ದಾವಣಗೆರೆ: ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗಾಗಿ ಮಾರ್ಚ್‌ 23ರಂದು ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ಬೃಹತ್‌ ರೈತರ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್, ಈ ರ‍್ಯಾಲಿಗೆ ದೇಶದ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸುವರು. ಇಂದಿನ ರಾಜಕೀಯ ಪಕ್ಷಗಳು ಬಡವರ ಪರ ಇಲ್ಲ ಎಂದು ಸಾಬೀತಾಗಿದ್ದು, ವಿಧಾನಸಭೆಯಲ್ಲಿ ರೈತರ ಪ್ರಾತಿನಿಧ್ಯ ಇರಬೇಕಾದ ಅವಶ್ಯಕತೆ ಇದೆ ಎಂದರು.

ಚುನಾವಣೆಯಲ್ಲಿ ರೈತ ಅಭ್ಯರ್ಥಿಗಳು ಕಣಕ್ಕೆ…
ಚುನಾವಣೆಯಲ್ಲಿ ರೈತ ಸಂಘದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ರಾಜ್ಯದ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಯಾವ ಪಕ್ಷದೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಹಿಂದೆ, ರೈತ ಸಂಘದಿಂದ ಟಿಕೆಟ್‌ ಪಡೆದವರು, ನಾನಾ ಕಾರಣಗಳಿಗೆ ಸ್ಫರ್ಧೆಯಿಂದ ಹಿಂದೆ ಸರಿದರು. ಆದರೆ ಈ ಬಾರಿ ಒತ್ತಡಕ್ಕೆ ಮಣಿಯದ ಅಭ್ಯರ್ಥಿಗಳಿಗೆ ಟಿಕೇಟ್‌ ನೀಡಲಾಗುವುದು ಎಂದರು.

ಮುಲಾಜಿಗೆ ಒಳಗಾಗಬಾರದು:
ರೈತ ಸಂಘ ರಾಜಕೀಯವಾಹಿ ಯಶಸ್ಸು ಕಂಡಿಲ್ಲದಿರುವುದಕ್ಕೆ ನಾನಾ ಕಾರಣಗಳಿವೆ. ಮೊದಲು ರೈತ ನಾಯಕರು ರಾಜೀ ರಾಜಕಾರಣ ಬಿಟ್ಟು ಜನರ ಮಧ್ಯೆ ಬೆಳೆಯುವುದು ಮಾತ್ರವಲ್ಲದೇ ನಿಷ್ಠುರವಾಗಿರಬೇಕು. ಯಾವುದೇ ಮುಲಾಜಿಗೂ ಒಳಗಾಗಬಾರದು ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಿ ಕೊನೆಭಾಗದ ರೈತರಿಗೆ ನೀರೋದಗಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ಮುಖಂಡರಾದ ಬಾಷಾ, ಇಟ್ಟೂರು ರಾಜು, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕಡಿದಾಳ್‌ ಶಾಮಣ್ಣ, ಮಂಜುನಾಥ್‌, ಜಡಿಯಪ್ಪ ದೇಸಾಯಿ, ಕೆಂಕೆರೆ ಸುರೇಶ್‌ ಸೇರಿದಂತೆ ಇತರರು ಇದ್ದರು.

Comments are closed.