ಕರ್ನಾಟಕ

ಜೆಡಿಎಸ್ ಪರ ಪ್ರಚಾರಕ್ಕಿಳಿಯಲಿರುವ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್

Pinterest LinkedIn Tumblr

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ರಾಜ್ಯ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿರುವ ಜೆಡಿಎಸ್, ಪ್ರಚಾರಕ್ಕಾಗಿ ಜನಸೇನಾ ಪಕ್ಷದ ನಾಯಕ ಹಾಗೂ ತೆಲುಗು ಚಿತ್ರರಂಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಕರೆತರಲಿದೆ ಎಂದು ಹೇಳಲಾಗುತ್ತಿದೆ.

ಪವನ್ ಕಲ್ಯಾಣ್ ಅವರಿಗೆ ರಾಜ್ಯದಲ್ಲಿಯೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿಯೇ ಇದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಅವರು ಪ್ರಚಾರ ಮಾಡಿದರೆ ಪಕ್ಷಕ್ಕೆ ಸಹಾಯಕವಾಗುತ್ತದೆ ಎಂಬ ದೃಷ್ಟಿಯಿಂದ ಪವನ್ ಕಲ್ಯಾಣ್ ಅವರನ್ನು ಕರೆತರಲು ಜೆಡಿಎಸ್ ನಿರ್ಧರಿಸಿದೆ.

ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಪವನ್ ಕಲ್ಯಾಣ್ ಅವರು ಒಪ್ಪಿಗೆ ನೀಡಿದ್ದಾರೆ. ಪವನ್ ಕಲ್ಯಾಣ್ ಆಗಮನದಿಂದ ಪಕ್ಷದ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ ಹಾಗೂ ವಕ್ತಾರ ರಮೇಶ್ ಬಾಬು ಅವರು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರು ಗಡಿ ಜಿಲ್ಲೆಗಳಾದ ಬಳ್ಳಾರಿ, ಕಲಬುರಗಿ, ರಾಯಚೂರು, ಕೋಲಾರ ಮತ್ತು ಇತರೆ ಜಿಲ್ಲೆಗಳಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಲಿದ್ದಾರೆ.

ಸ್ಥಳೀಯ ಪಕ್ಷದ ಪ್ರಾಮುಖ್ಯತೆ ಕುರಿತು ರಾಜ್ಯದ ಜನತೆಗೆ ಅರಿವಾಗಿದೆ. ಕುಮಾರಸ್ವಾಮಿ ಅವಪ ಪುತ್ರ ನಿಖಿಲ್ ಗೌಡ ಕೂಡ ಪಕ್ಷದ ಪರ ಸ್ಟಾರ್ ಪ್ರಚಾರಕರಾಗಿ ಪ್ರಚಾರ ನಡೆಸಲಿದ್ದಾರೆಂದು ಬಾಬು ಅವರು ತಿಳಿಸಿದ್ದಾರೆ.

ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಪಕ್ಷವನ್ನು ತೊರೆದ ಬಳಿಕ ಜೆಡಿಎಸ್ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ಸಲುವಾಗಿ ಪಕ್ಷಕ್ಕೆ ಸಹಾಯ ಮಾಡಲು ಸಮರ್ಥ ನಾಯಕನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಕಾರ್ಯವನ್ನು ಆರಂಭಿಸಿದೆ. ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು.

Comments are closed.