ಕರ್ನಾಟಕ

ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದರೆ ಗುಂಡಿಕ್ಕಿ: ನಗರ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್

Pinterest LinkedIn Tumblr

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡುವ ಕ್ರಿಮಿನಲ್‌ಗಳ ಮೇಲೆ ಗುಂಡು ಹಾರಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸುನಿಲ್‌ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು.

ಒಂದು ವಾರದ ಅಂತರದಲ್ಲಿ ಆರು ಪ್ರತ್ಯೇಕ ಪ್ರಕರಣಗಳಲ್ಲಿ 13 ಪೊಲೀಸರ ಮೇಲೆ ಹಲ್ಲೆ ನಡೆದ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೊಳಗಾದ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಆಯುಕ್ತರು, ಕ್ರಿಮಿನಲ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

‘‘ಪೊಲೀಸ್‌ ಇಲಾಖೆಯು ಸಿಬ್ಬಂದಿಗೆ ಬಂದೂಕುಗಳನ್ನು ನೀಡಿರುವುದು ಅಪರಾಧ ನಿಯಂತ್ರಿಸಲು ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಕ್ರಿಮಿನಲ್‌ಗಳ ಮೇಲೆ ಹಾರಿಸಲೆಂದು. ಹೀಗಾಗಿ, ಯಾರಾದರೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದರೆ ಅಂತಹ ವ್ಯಕ್ತಿಗಳ ಮೇಲೆ ಗುಂಡು ಹಾರಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಹಲ್ಲೆಕೋರರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ,’’ ಎಂದು ಹೇಳಿದರು.

ಗಸ್ತು ಪೊಲೀಸರ ಸಂಖ್ಯೆ ಹೆಚ್ಚಳ:

‘‘ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಾಗ ಪೊಲೀಸರು ಕಡ್ಡಾಯವಾಗಿ ಬಂದೂಕು ಇಟ್ಟುಕೊಂಡಿರಬೇಕು. ಅಲ್ಲದೆ, ಅಂತಹ ಪ್ರದೇಶಗಳಲ್ಲಿ ಇಬ್ಬರ ಬದಲು ನಾಲ್ವರು ಪೊಲೀಸರು ಗಸ್ತು ಹೋಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗ ನಡೆದಿರುವ ಪ್ರಕರಣಗಳಲ್ಲಿ ಬಹುತೇಕ ಸಾಫ್ಟ್‌ವೇರ್‌ ಉದ್ಯೋಗಿಗಳು, ವಿದೇಶಿಯರು ಮದ್ಯದ ನಶೆಯಲ್ಲಿರುವಾಗ ಪೊಲೀಸರ ಜತೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದಾರೆ. ರೌಡಿಗಳು, ಗೂಂಡಾಗಳು ಪೊಲೀಸರ ಮೇಲೆ ಉದ್ದೇಶಪೂರ್ವಕವಾಗಿ ಬಂದು ಹಲ್ಲೆ ನಡೆಸಿರುವ ಪ್ರಕರಣಗಳು ನಡೆದಿಲ್ಲ,’’ ಎಂದರು.

‘‘ಎಚ್‌ಬಿಆರ್‌ ಲೇಔಟ್‌ನಲ್ಲಿ ಮದ್ಯದ ನಶೆಯಲ್ಲಿದ್ದ ಕಾಂಗೋ ಮಹಿಳೆ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಳು. ಶುಕ್ರವಾರ ರಾತ್ರಿ ಜೀವನ ಬಿಮಾನಗರದಲ್ಲಿ ಮಹಿಳಾ ಎಸ್‌ಐ ಮೇಲೆ ನಡೆದ ಹಲ್ಲೆ ನಡೆಸಿದವರು ಕೇರಳ ಮೂಲದ ಸಾಫ್ಟ್‌ವೇರ್‌ ಉದ್ಯೋಗಿಗಳು. ಮದ್ಯದ ನಶೆಯಲ್ಲಿ ಗಲಾಟೆ ಮಾಡುತ್ತಿರುವುದನ್ನು ನಿಯಂತ್ರಿಸಲು ಮುಂದಾದಾಗ ಅವರು ಹಲ್ಲೆ ನಡೆಸಿದ್ದಾರೆ. ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ’’ ಎಂದರು.

ಆರೋಪಿಗಳ ಸುಳಿವು ಲಭ್ಯ:

‘‘ಜೆ.ಜೆ. ನಗರದಲ್ಲಿ ಪೊಲೀಸ್‌ ಕಾನ್ಸ್‌ಟೆಬಲ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ವ್ಯಕ್ತಿಯ ಬಗ್ಗೆ ಸುಳಿವಿದೆ. ಅದೇ ರೀತಿ ಕೊಡಿಗೇಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದವರನ್ನು ಹಿಡಿಯಲು ಮುಂದಾದಾಗ ಪೊಲೀಸರು ಬೈಕ್‌ನಿಂದ ಬಿದ್ದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರ ಬಳಿ ಇದ್ದ ಒಂದು ಬಂದೂಕು ದೋಚಿದ್ದಾರೆ. ಎರಡು ಪ್ರಕರಣಗಳಲ್ಲಿ ಆರೋಪಿಗಳ ಬಗ್ಗೆ ಸುಳಿವಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’’ ಎಂದು ಆಯುಕ್ತ ಸುನಿಲ್‌ಕುಮಾರ್‌ ತಿಳಿಸಿದರು.

30 ಬಾರ್‌ಗಳಿಗೆ ಬೀಗ

‘‘ಕೈಲಾಶ್‌ ಬಾರ್‌ನಲ್ಲಿ ಅಗ್ನಿ ಅನಾಹುತದ ಬಳಿಕ ನಗರದಲ್ಲಿ ಅವಧಿಗೆ ಮುನ್ನ ಹಾಗೂ ಅವಧಿ ಮುಕ್ತಾಯದ ನಂತರವೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ 30ಕ್ಕೂ ಹೆಚ್ಚು ಬಾರ್‌, ವೈನ್‌ ಶಾಪ್‌ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾರದಿಂದ ಒಂದು ತಿಂಗಳವರೆಗೆ ಬಾರ್‌ಗಳ ಬಾಗಿಲು ಮುಚ್ಚಿಸಲಾಗಿದೆ’’ ಎಂದು ನಗರ ಪೊಲೀಸ್‌ ಆಯುಕ್ತ ಸುನಿಲ್‌ ಕುಮಾರ್‌ ಹೇಳಿದರು.

Comments are closed.