ಕರ್ನಾಟಕ

ರವಿ ಬೆಳಗೆರೆ ಬಂಧನದ ಬೆನ್ನಲ್ಲೇ 2ನೇ ಪತ್ನಿ ನಾಪತ್ತೆ? 2ನೇ ದಿನಕ್ಕೆ ಕಾಲಿಟ್ಟ ಪತ್ರಕರ್ತ ರವಿ ಬೆಳಗೆರೆ ವಿಚಾರಣೆ

Pinterest LinkedIn Tumblr

 

ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ “ಹಾಯ್‌ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ ಬೆನ್ನಲ್ಲೇ ಅವರ 2 ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದಾರೆ ಎಂಬ ವರದಿಗಳು ಕೇಳಿಬಂದಿವೆ.

ಮಾಧ್ಯಮಗಳು ವರದಿ ಮಾಡಿರುವಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಯಶೋಮತಿ ಅವರ ಮನೆಗೆ ನಿನ್ನೆ ಸಂಜೆಯಿಂದ ಬೀಗ ಹಾಕಲಾಗಿದ್ದು, ಇಲ್ಲಿಯವರೆಗೂ ಆ ಮನೆಗೆ ಯಾರೂ ಬಂದಿಲ್ಲ. ಅಲ್ಲದೆ ಬೆಳಗೆರೆ ಪತ್ನಿ ಯಶೋಮತಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಅವರ ಫೇಸ್ ಬುಕ್ ಖಾತೆ ಕೂಡ ಸ್ಥಗಿತವಾಗಿದೆ. ಸಿಸಿಬಿ ಪೊಲೀಸರ ವಿಚಾರಣೆಗೆ ಹೆದರಿ ಯಶೋಮತಿ ಅವರ ನಾಪತ್ತೆಯಾಗಿರಬಹುದು ಎಂದು ವರದಿಯಲ್ಲಿ ಶಂಕಿಸಲಾಗಿದೆ.

ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಲೇಔಟ್‌ ನಲ್ಲಿರುವ ನಿವಾಸದಲ್ಲಿ ಯಶೋಮತಿ ಅವರು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಸುಪಾರಿ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

2ನೇ ದಿನವೂ ಸತತ ವಿಚಾರಣೆ
ಪ್ರಸ್ತುತ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದು, ಪುತ್ರಿ ಚೇತನಾ ಬೆಳಗೆರೆ ಅವರು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಬಳಿಯಿರುವ ರವಿ ಬೆಳಗೆರೆ ಅವರ ತೋಟದ ಮನೆ, ಚಿಕ್ಕಮಗಳೂರಿನಲ್ಲಿರುವ ಕಾಫಿ ಎಸ್ಟೇಟ್‌ ನಲ್ಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಅರಣ್ಯಾಧಿಕಾರಿಗಳಿಂದ ತನಿಖೆ
ಬೆಂಗಳೂರಿನ ಹಾಯ್ ಬೆಂಗಳೂರು ಕಚೇರಿಯಲ್ಲಿ ಸುಮಾರು 50 ವರ್ಷ ಹಳೆಯದಾದ ಜಿಂಕೆಯ ಚರ್ಮ ಮತ್ತು ಆಮೆಯ ಚಿಪ್ಪು ಪತ್ತೆಯಾಗಿರುವ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಗಳಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸಿಸಿಬಿ ಅಧಿಕಾರಿಗಳು ಪತ್ರ ಬರೆದಿದ್ದರು ಎನ್ನಲಾಗಿದೆ.

Comments are closed.