ಕರ್ನಾಟಕ

ಕೊಪ್ಪಳ: ಈಜಲು ತೆರಳಿದ್ದ ತಂದೆ, ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲು

Pinterest LinkedIn Tumblr

ಕೊಪ್ಪಳ: ಈಜಲು ತೆರಳಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾದ ದಾರುಣ ಘಟನೆ ಸೋಮವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಕೆರೆಯಲ್ಲಿ ಸಂಭವಿಸಿದೆ.

ಹೈದರಾಬಾದ್ ಮೂಲದ ರಾಘವೇಂದ್ರ ಎಂಬವರು ಇಂದು ಬೆಳಗ್ಗೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ತಮ್ಮ ನಾಲ್ವರು ಮಕ್ಕಳ ಜತೆ ಹೇಮಗುಡ್ಡದ ಕೆಳಗಡೆ ಇರುವ ಕೆರೆಯಲ್ಲಿ ಈಜಲು ತೆರಳಿದ್ದರು.

ಈಜಾಡುತ್ತಿದ್ದಾಗಲೇ ಆಳಕ್ಕೆ ಸಿಲುಕಿದ್ದ ಮಕ್ಕಳನ್ನು ತಂದೆ ರಕ್ಷಿಸಲು ಹೋದ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಐವರೂ ನೀರುಪಾಲಾಗಿರುವುದಾಗಿ ಪ್ರತ್ಯಕ್ಷದರ್ಶಿ ಸಂಗಮೇಶ್ ಅವರು ತಿಳಿಸಿದ್ದಾರೆ.

ಮೃತರು ರಾಘವೇಂದ್ರ (35), ಪವಿತ್ರ (14), ಪವನಿ (12), ಪೌರ್ಣಿಕಾ, ಆಶೀಶ್(14) ಎಂದು ಗುರುತಿಸಲಾಗಿದೆ.ನೀರುಪಾಲಾದ ಐವರ ಮೃತದೇಹವನ್ನು ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.