ಹುಬ್ಬಳ್ಳಿ: ಹಿಂದೂ ಧರ್ಮ ಕೊಳೆತು ನಾರುತ್ತಿದೆ ಇಂಥ ಧರ್ಮ ಶೋಷಿತರಿಗೆ ಬೇಕಿಲ್ಲ ಎಂದು ಹುಬ್ಬಳ್ಳಿಯ ಲಿಂಗಾಯತ ಸಮಾವೇಶದಲ್ಲಿ ಆಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಹಿಂದೂ ಧರ್ಮ ಶ್ರೇಷ್ಠವಾಗಿದ್ದರೆ ಗೌತಮ ಬುದ್ಧ, ಮಹಾವೀರ, ಗುರುನಾನಕ್ ಹಾಗೂ ಬಸವಣ್ಣ ಯಾಕೆ ಧರ್ಮ ಬಿಟ್ಟುಹೋದರು. ಬಸವಣ್ಣ ಸಮತಾ ಸಮಾಜ ಕಟ್ಟೋದಕ್ಕಾಗಿ ಲಿಂಗಾಯತ ಧರ್ಮ ಸ್ಥಾಪಿಸಿದ್ದರು. ಲಿಂಗಾಯತಕ್ಕೆ ಬಸವಣ್ಣನೇ ಕರ್ತೃ ಅಂತ ಸರ್ವಜ್ಞನೇ ಹೇಳಿದ್ದಾನೆ . ಹಿಂದೂಗಳು ಆಳಿದ ಈ ದೇಶದಲ್ಲಿ ಜಾತಿ ವ್ಯವಸ್ಥೆ ಇತ್ತು. ಫ್ರೆಂಚರು, ಬ್ರಿಟೀಷರು, ಮೊಗಲರು ದೇಶಕ್ಕೆ ಬರೋಕೆ ಕಾರಣ ಇಲ್ಲಿನ ಶೋಷಣೆ ಎಂದು ಪಾಟೀಲ್ ಹೇಳಿದ್ದಾರೆ.
ಹಿಂದೂ ಧರ್ಮ ದುಡಿಯೋ ವರ್ಗವನ್ನು ಕನಿಷ್ಠವಾಗಿ ನೋಡಿದೆ ಎಂದಿರುವ ಪಾಟೀಲ್, ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಮತಾಂತರವಾದಾಗ ಹಿಂದೂ ಧರ್ಮ ಆಳಿದವರೆಲ್ಲೂ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಿಂದ ಒಂಬತ್ತು ಲಿಂಗಾಯತರು ಎಂಪಿಗಳಾಗಿದ್ದಾರೆ, ಆದರೆ ಕೇಂದ್ರದಲ್ಲಿ ಲಿಂಗಾಯತರು ಸಚಿವರಾಗಲಿಲ್ಲ. ಲಿಂಗಾಯತರು ಸಚಿವರಾಗಲು ಯೋಗ್ಯರಲ್ಲವೇ? ಎಂದು ಈ ವೇಳೆ ಕೇಂದ್ರವನ್ನು ಪ್ರಶ್ನಿಸಿದ್ದಾರೆ.
900 ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡಲಾಗಿದೆ. ಐತಿಹಾಸಿಕ ದಾಖಲೆಗಳು ಸಹ ಲಿಂಗಾಯತರ ಪರವಾಗಿ ಇವೆ. ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಈ ಧರ್ಮದಲ್ಲಿ ಜಾತಿಭೇದ, ಶೋಷಣೆ, ಅಸ್ಪ್ರಶ್ಯತೆ, ವರ್ಗ- ವರ್ಣಭೇದವಿಲ್ಲ. ಆದರೆ ವೀರಶೈವ ಮಹಾಸಭಾದವರು ಖುರ್ಚಿಗಾಗಿ ರಾಜಕೀಯ ಮಾಡುತ್ತಿದ್ದರು. ಇವರ ಬಳಿ ಬೌದ್ಧಿಕ ಬಂಡವಾಳ, ಸತ್ಯಾಂಶವಿಲ್ಲ. ಲಿಂಗಾಯತ ಧರ್ಮದ 99 ಒಳಪಂಗಡಗಳಲ್ಲಿ ವೀರಶೈವರು ಒಂದು ಎಂದು ಪಾಟೀಲ್ ನುಡಿದರು.
ವೀರಶೈವರು ತಮ್ಮ ಧರ್ಮ ಸಂಸ್ಥಾಪಕ ಕಲ್ಲಿನಲ್ಲಿ ಹುಟ್ಟಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮುಂದೆ ಹೇಳಿದರೆ ನ್ಯಾಯಾಧೀಶರು ಶಟ್ಅಪ್ ನಾನ್ಸೆನ್ಸ್ ಗೆಟ್ಔಟ್ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಾವು ಹಿಂದೂ ಧರ್ಮದ ವಿರೋಧಿಗಳಲ್ಲ. ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಯಾರಿಗೂ ತೊಂದರೆಯಾಗಲ್ಲ. ಪ್ರಭಾಕರ್ ಕೋರೆ ಲಿಂಗಾಯತರಿಗೆ ದ್ರೋಹ ಬಗೆಯುತ್ತಿದ್ದಾರೆ. ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಸಪ್ತ ಋಷಿಗಳಿಗೆ ದ್ರೋಹ ಮಾಡುತ್ತಿದ್ದಾರೆ. ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾಗಿ ಅನ್ನ ಉಣ್ಣುತ್ತಿದ್ದಾರೆ ಎಂದು ಕೋರೆ ವಿರುದ್ಧ ಪಾಟೀಲ್ ಕಿಡಿಕಾರಿದ್ದಾರೆ.
‘ ಪ್ರಭಾಕರ್ ಕೋರೆ ಉಂಡ ತಾಟಿನಲ್ಲಿ ಹೇಸಿಗೆ ಮಾಡುತ್ತಿದ್ದಾರೆ. ಪ್ರಭಾಕರ್ ಕೋರೆ ಗ್ರಾಮ ಪಂಚಾಯಿತಿಗೂ ಆರಿಸಿ ಬರಲ್ಲ. ಅವರ ಊರು ಅಂಕಲಿಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ. ಕೆಎಲ್ಇ ಸಂಸ್ಥೆ ಲಿಂಗಾಯತರದ್ದು, ಬೆಂಬಲ ನೀಡದಿದ್ದರೆ ಸಂಸ್ಥೆಯಿಂದ ಖಾಲಿ ಮಾಡಿಸಬೇಕಾಗುತ್ತೆ. ಸ್ವಾಭಿಮಾನವಿದ್ದರೆ ಕೆಎಲ್ಇ ಬಿಟ್ಟು, ವೀರಶೈವ ಸಂಸ್ಥೆ ಹುಡುಕಿಕೊಂಡು ಹೋಗಲಿ. ಲಿಂಗಾಯತರ ಬೆನ್ನು ಹತ್ತದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಕೋರೆಗೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
Comments are closed.