ತುಮಕೂರು(ಜ. 18): ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ಚಪ್ಪಲಿಹಾರ ಹಾಕಿ ಅಮಾನುಷವಾಗಿ ಹಿಂಸಿಸಿದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಮ್ಮ ಮನೆಯ ಮಗಳನ್ನು ಚುಡಾಯಿಸಿದ್ದಾನೆಂದು ಆತನಿಗೆ ಹೊಡೆದು ಪಾಠ ಕಲಿಸಿದೆ ಎಂದು ಹುಡುಗಿಯ ಕುಟುಂಬದವರು ಹೇಳಿದ್ದು ಸುಳ್ಳು ಎಂಬ ಮಾಹಿತಿಯೊಂದು ಮಾಧ್ಯಮಕ್ಕೆ ಸಿಕ್ಕಿದೆ. ಲಾರಿ ಡ್ರೈವರ್ ಆಗಿರುವ ಅಭಿಷೇಕ್ ಹಾಗೂ 9ನೇ ತರಗತಿ ವಿದ್ಯಾರ್ಥಿನಿ ಪದ್ಮಾ ನಡುವೆ ಒಂದು ವರ್ಷದಿಂದ ಲವ್ ಇತ್ತೆನ್ನಲಾಗಿದೆ. ತಾನು ಬೇಡವೆಂದರೂ ಪದ್ಮಾಳೇ ದಂಬಾಲು ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಳು ಎಂದು ಅಭಿಷೇಕ್ ಹೇಳಿದ್ದಾನೆ.
ಗುಬ್ಬಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹುಡುಗಿಯು ಸವರ್ಣೀಯಳಾಗಿದ್ದು, ಹುಡುಗ ದಲಿತನಾದ ಕಾರಣಕ್ಕೆ ಇಬ್ಬರ ಪ್ರೀತಿಗೆ ವಿರೋಧವಿತ್ತು. ತನ್ನ ಮನೆಯವರು ಹೊಡೆಯಲು ಸಿದ್ಧತೆ ನಡೆಸಿದ್ದಾರೆ. ಊರು ಬಿಟ್ಟ ಹೋಗುವಂತೆ ಅಭಿಷೇಕ್’ಗೆ ಪದ್ಮಾ ಕೆಲ ದಿನಗಳ ಹಿಂದಷ್ಟೇ ಸೂಚಿಸಿರುತ್ತಾಳೆ. ಆದರೆ, ಅಭಿಷೇಕ್ ಅದಕ್ಕೆ ಕಿವಿಗೊಟ್ಟಿರಲಿಲ್ಲ. ಜ.15ರಂದು ಪದ್ಮಾಳ ತಂದೆ ಕಾಡು ಪ್ರಕಾಶ್ ಅವರು ಉಪಾಯವಾಗಿ ಅಭಿಷೇಕ್’ನನ್ನು ತಮ್ಮ ತೋಟದ ಮನೆಗೆ ಕರೆಸುತ್ತಾರೆ. ಅಭಿಷೇಕ್’ನನ್ನು ಬೆತ್ತಲೆಗೊಳಿಸಿ, ಚಪ್ಪಲಿಹಾರ ಹಾಕಿಸುತ್ತಾರೆ. ನಂತರ, ದೊಣ್ಣೆಯಿಂದ ಚೆನ್ನಾಗಿ ಥಳಿಸುತ್ತಾರೆ. ಸ್ಮಶಾನದಲ್ಲಿ ಹೆಣದ ಮೇಲಿರುವ ವಸ್ತ್ರವನ್ನೂ ಈತನಿಗೆ ತೊಡಿಸುತ್ತಾರೆ. ಮೇಲ್ಜಾತಿಯ ಹುಡುಗಿಯ ಮೇಲೆ ಕಣ್ಣು ಹಾಕಿದರೆ ಇದೇ ಗತಿಯಾಗುತ್ತದೆ ಎಂದು ಎಚ್ಚರಿಸುತ್ತಾರೆ.
ಮೂವರ ಬಂಧನ:
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಹುಡುಗಿಯ ತಂದೆ ಕಾಡು ಪ್ರಕಾಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ
Comments are closed.