ಬೆಂಗಳೂರು: ನಿಜಕ್ಕೂ ಅದೊಂದು ಸಾಮೂಹಿಕ ಲೈಂಗಿಕ ಕಿರುಕುಳವಾಗಿತ್ತು. ಪಾನಮತ್ತ ಯುವಕರು ಬೇಕೆಂದೇ ಯುವತಿಯರ ಮೈ ಮುಟ್ಟುತ್ತಿದ್ದರು ಎಂದು ಬೆಂಗಳೂರಿನಲ್ಲಿ ನಡೆದ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ನಡೆದ ಯುವತಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಇದೀಗ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಘಟನೆಗೆ ಸಾಕ್ಷಿಯಾದ ಪ್ರತ್ಯಕ್ಷದರ್ಶಿಗಳು ಇದೀಗ ಮಾಧ್ಯಮಗಳ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ಅಂದು ಜನ ಹೆಚ್ಚಾಗಿ ಸೇರಿದ್ದರು. ಸಮಯ 12ಗಂಟೆ ಆಗುತ್ತಿದ್ದಂತೆಯೇ ಕೆಲ ಯುವತಿಯರು ಕೂಗಲಾರಂಭಿಸಿದರು. ಕೆಲವರು ಸಹಾಯಕ್ಕಾಗಿ ಯಾಚಿಸುತ್ತಿದ್ದರು. ಬಹಶಃ ನಾನು ಕಾಲ್ತುಳಿತ ಸಂಭವಿಸಿರಬಹುದು ಎಂದು ಭಾವಿಸಿದೆ. ಆದರೆ ಕೆಲ ಪಾನಮತ್ತ ಯುವಕರು ಬೇಕೆಂದೇ ಯುವತಿರ ಮೇಲೆ ಬೀಳುತ್ತಿದ್ದರು. ಯುವತಿಯ ಮೈ ಮುಟ್ಟುತ್ತ ವಿಕೃತವಾಗಿ ವರ್ತಿಸುತ್ತಿದ್ದರು ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದಾರೆ.
ಇನ್ನು ಘಟನೆಯನ್ನು ಮಹಿಳಾ ಪರ ಸಂಘಟನೆಗಳು ಕಟುವಾಗಿ ಖಂಡಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿವೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಮಹಿಳಾ ಪರ ಸಂಘಟನೆಯ ರಂಜನಾ ಕುಮಾರಿ ಅವರು, ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು ಎನ್ನುವುದಕ್ಕೆ ಯುವತಿಯರ ಮೇಲಿನ ಲೈಂಗಿಕ ಕಿರುಕುಳವೇ ಸಾಕ್ಷಿ. ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥಿರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
Comments are closed.