ಕರ್ನಾಟಕ

ನರೇಂದ್ರ ಮೋದಿಗೆ ಕಂಟಕ; ಬ್ರಹ್ಮಾಂಡ ಗುರೂಜಿ

Pinterest LinkedIn Tumblr

brahmanda-guruji_
ಬೆಂಗಳೂರು(ಡಿ. 31): ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದರೂ ಹೊಸ ವರ್ಷದಲ್ಲಿ ಅವರಿಗೆ ಕಂಟಕವಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸುವರ್ಣನ್ಯೂಸ್’ನ ಸ್ಟುಡಿಯೋದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಮಾತನಾಡಿದ ನರೇಂದ್ರಬಾಬು ಶರ್ಮಾ, ದೇಶದ ಪ್ರಧಾನಿಗೆ ಗಂಡಾಂತರ ಬರುವುದು ನಿಶ್ಚಿತ ಎಂದಿದ್ದಾರೆ. ಹೊಸ ವರ್ಷದಲ್ಲಿ ಶನೈಶ್ಚರನ ಆಟವಿದ್ದು, ಆತ ಕರ್ಮಫಲವನ್ನು ಉಣಿಸಿಯೇ ತೀರುತ್ತಾನೆ. ಮೋದಿಯವರ ಪೂರ್ವಕರ್ಮ ಅಳಿಸಿಹೋವುದಿಲ್ಲ. ಅದನ್ನು ಅವರು ಅನುಭವಿಸಲೇಬೇಕು ಎಂದು ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಮೋದಿಗೆ ಸಲಹೆ:
ಹೊಸ ವರ್ಷದಲ್ಲಿ ಪ್ರಧಾನಿಯವರು ಆದಿತ್ಯ ಹೃದಯ ಮಂತ್ರ ಪಠಣವನ್ನು ಮಾಡಿದರೆ ಒಳ್ಳೆಯದು ಎಂದು ಬ್ರಹ್ಮಾಂಡ ಗುರೂಜಿ ಸಲಹೆ ನೀಡಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿಯವರ ನೋಟ್ ಬ್ಯಾನ್ ನಿರ್ಧಾರವನ್ನು ಗುರೂಜಿ ಶ್ಲಾಘಿಸಿದ್ದಾರೆ. ಇಂಥದ್ದೊಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಎದೆಗಾರಿಕೆ ಹೊಂದಿರುವ ವಿಶ್ವದ ಏಕೈಕ ವ್ಯಕ್ತಿ ಎಂದರೆ ನರೇಂದ್ರ ಮೋದಿಯೇ. ಆ ಮನುಷ್ಯನನ್ನು ಕಾಪಾಡಿಕೊಳ್ಳುವ ಹೊಣೆ ನಮಗಿದೆ ಎಂದವರು ಕರೆ ನೀಡಿದ್ದಾರೆ.
ತುಂಬಾ ಜನರು ಜೈಲಿಗೆ:
ಬರುವ ವರ್ಷದಲ್ಲಿ ನಾಡಿನ ಜೈಲುಗಳು ಭರ್ತಿಯಾಗುತ್ತವೆ. ಬಹಳಷ್ಟು ಭ್ರಷ್ಟರು, ಕಳ್ಳರು ಜೈಲುಪಾಲಾಗುತ್ತಾರೆ. ಇನ್ನುಳಿದಂತೆ, ದೇಶದ ಬಹುಪಾಲು ಜನರು ನೆಮ್ಮದಿಯಿಂದಿರುತ್ತಾರೆ. ಆರೋಗ್ಯ ಚೆನ್ನಾಗಿರುತ್ತದೆ ಎಂದು ನರೇಂದ್ರಬಾಬು ಶರ್ಮಾ ಭವಿಷ್ಯ ಹೇಳಿದ್ದಾರೆ.
ದೊಡ್ಡ ಶಾಲೆಗಳಿಗೆ ಉಳಿಗಾಲವಿಲ್ಲ:
“ಮಠ-ಮಾನ್ಯಗಳು ನಡೆಸುತ್ತಿರುವ ದೊಡ್ಡದೊಡ್ಡ ಶಾಲೆಗಳಲ್ಲಿ ರೇಡ್ ಆಗುವುದು ಗ್ಯಾರಂಟಿ… ಒಂದು ಮೆಡಿಕಲ್ ಸೀಟಿಗೆ 1 ಕೋಟಿ.. ನಾಲ್ಕು ಸಾವಿರ ಸೀಟಿಗೆ ನಾಲ್ಕು ಸಾವಿರ ಕೋಟಿ… ನರೇಂದ್ರ ಮೋದಿ ಮುಂದೆ ಮಾಡುವುದು ಈ ಕೆಲಸವನ್ನೇ… ಸರಸ್ವತಿ ದೇವಿಯನ್ನು ಈ ರೀತಿ ಅವಮಾನ ಮಾಡುತ್ತಿರುವ ಇಂಥ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಉಳಿಗಾಲವಿರುವುದಿಲ್ಲ” ಎಂದವರು ಎಚ್ಚರಿಕೆ ನೀಡಿದ್ದಾರೆ.
ರಿಸರ್ವೇಶನ್ ಬಗ್ಗೆ:
ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿ ಇರಬಾರದು ಎಂದು ಬ್ರಹ್ಮಾಂಡ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ. “ಎಲ್ಲಿ ಬೇಕಾದರೂ ರಿಸರ್ವೇಶನ್ ಕೋಟಾ ಇಟ್ಟುಕೊಳ್ಳಿ. ಆದರೆ, ಎಜುಕೇಶನ್ ಸಿಸ್ಟಂನಲ್ಲಿ ಇದು ಇರಬಾರದು. ಸರಸ್ವತಿ ತಾಯಿ ಯಾವುದೇ ಭೇದವಿಲ್ಲದೇ ಎಲ್ಲರಿಗೂ ವಿದ್ಯೆ ನೀಡುತ್ತಾಳೆ. ಒಳ್ಳೆಯ ಮಾರ್ಕ್ಸ್ ತೆಗೆದ ಮಗುವಿಗೆ ನೀವು ರಿಸರ್ವೇಶನ್’ನಿಂದ ಸೀಟು ಕಿತ್ತುಕೊಂಡರೆ ಆ ದೇವರು ಕ್ಷಮಿಸುವುದಿಲ್ಲ” ಎಂದು ಗುರೂಜಿ ಹೇಳಿದ್ದಾರೆ.
ಸಿದ್ದರಾಮಯ್ಯ ಒಳ್ಳೆಯ ರಾಜಕಾರಣಿ:
“ಸಿದ್ದರಾಮಯ್ಯ ಬಹಳ ಒಳ್ಳೆಯ ಮನಸ್ಸಿನ ರಾಜಕಾರಣಿ. ಆದರೆ, ಅವರ ಜೊತೆಯಲ್ಲಿದ್ದವರ ತಪ್ಪಿಗೆ ಅವರು ಬಲಿಯಾಗುತ್ತಿದ್ದಾರೆ. ರಮೇಶ್ ಕುಮಾರ್ ಅವರಂಥವರು ಸಿದ್ದರಾಮಯ್ಯನವರ ಬಳಿ ಇದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ದೇವೇಗೌಡರಂಥ ಒಳ್ಳೆಯ ರಾಜಕಾರಣಿಯ ಸಲಹೆಗಳು ಸಿದ್ದರಾಮಯ್ಯನವರನ್ನು ಕಾಪಾಡುತ್ತಿವೆ. ಸಿದ್ದರಾಮಯ್ಯನವರು ಚಾಮುಂಡೇಶ್ವರಿ ದೇವರನ್ನು ಬಹಳ ನಂಬಿದ್ದಾರೆ. ಆ ದೇವಿಯೇ ಅವರನ್ನು ಕಾಪಾಡುತ್ತಿದೆ” ಎಂದು ಬ್ರಹ್ಮಾಂಡ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಬ್ರಹ್ಮಾಂಡ ಭವಿಷ್ಯಗಳು:
* ಆಸ್ಟ್ರೇಲಿಯಾ ಬಳಿಯ ಪೆಸಿಫಿಕ್ ಮಹಾಸಾಗರದಲ್ಲಿ ನೀರು ಉಕ್ಕಿ ಹರಿಯುತ್ತದೆ. ಜಲಪ್ರವಾಹವಾಗಲಿದೆ.
* ಆಫ್ರಿಕಾದಲ್ಲಿ ಭೀಕರ ಬರಗಾಲಕ್ಕೆ ಪ್ರಾಣಿಪಕ್ಷಿಗಳು ಅಲ್ಲೋಲಕಲ್ಲೋಲಗೊಳ್ಳುತ್ತವೆ
* ದೇಶದಲ್ಲಿ ಜಲ, ಅಗ್ನಿ, ವಿದ್ಯುತ್’ನಿಂದ ಅಪಘಾತಗಳು ಆಗುವ ಪ್ರಮಾಣ ಹೆಚ್ಚಿರುತ್ತವೆ. ಮಹಿಳೆಯರು ಹುಷಾರಾಗಿರಬೇಕು.
* ದೇಶದಲ್ಲಿ ಬಹುತೇಕ ಜನರು ನೆಮ್ಮದಿಯಿಂದಿರುತ್ತಾರೆ.
* ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ.

Comments are closed.