ಕರ್ನಾಟಕ

ನನ್ನನ್ನು ಮೊಸಳೆ ತಿಂದಿದೆ ಎಂದು ಸುಳ್ಳು ಹೇಳಿ ಪ್ರಿಯಕರನೊಂದಿಗೆ ಪರಾರಿಯಾದ ಯುವತಿ ! ಕೊನೆಗೂ ಗುಟ್ಟು ರಟ್ಟಾಯಿತು …..

Pinterest LinkedIn Tumblr

missing

ಕಲಬುರಗಿ: ಪ್ರಿಯಕರನ ಜೊತೆ ಪರಾರಿಯಾಗಲು ಗೆಳತಿಯ ಬಳಿ ಮೊಸಳೆಗೆ ಬಲಿಯಾಗಿದ್ದೇನೆ ಎಂದು ಊರಲ್ಲೆಲ್ಲಾ ಸುಳ್ಳು ಹೇಳಿಸಿ ಗ್ರಾಮಸ್ಥರೆಲ್ಲರೂ ಬೇಸ್ತುಬಿದ್ದ ಘಟನೆ ಜೇವರ್ಗಿಯ ಭೋಸ್ಗಾ (ಬಿ) ಗ್ರಾಮದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಭೋಸಗಾ ಬಿ ಗ್ರಾಮ ಅಶ್ವಿನಿ ಎಂಬ ಇದೇ ಗ್ರಾಮದ 18 ವರ್ಷದ ಯುವತಿ ಬಟ್ಟೆ ತೊಳೆಯಲು ನದಿಗೆ ಇಳಿದಾಗ ಮೊಸಳೆಯೊಂದು ಎಳೆದುಕೊಂಡು ಹೋಗಿದೆ ಎಂದು ಆಕೆಯ ಗೆಳತಿಯೇ ವಿಷಯ ತಿಳಿಸಿದಾಗ ಇಡೀ ಊರೇ ಬೆಚ್ಚಿಬಿತ್ತು. ಪೋಲೀಸ್, ಅಗ್ನಿ ಶಾಮಕ ದಳ, ಮೀನುಗಾರರು ನದಿಗಿಳಿದು ಮೊಸಳೆ ಪಾಲಾದ ಯುವತಿಯ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. 6 ಗಂಟೆ ಕಾರ್ಯಾಚರಣೆ ನಡೆಸಿದರೂ ಯುವತಿ ಸಿಗಲಿಲ್ಲ. ಅಷ್ಟರಲ್ಲಿಯೇ ಆಕೆಯ ಗೆಳತಿ ಚೆನ್ನಮ್ಮ ನೀಡಿದ ಮಾಹಿತಿ ಎಲ್ಲರನ್ನು ದಂಗು ಬಡಿಸಿತು.

ಮೊಸಳೆ ಬಾಯಿಗೆ ಸಿಲುಕಿ ನಮ್ ಹುಡುಗಿ ಬಲಿಯಾಗಿದ್ದಾಳೆ. ದಯಮಾಡಿ ಬಂದು ನದಿಯೊಳಗೆ ಹುಡುಕಾಡಿ ನಮ್ ಹುಡುಗಿಯ ಶವ ಪತ್ತೆಮಾಡಿ ಕೊಡಿ. ಹೀಗಂತ ಆಕೆಯ ಪೋಷಕರು ನೆಲೋಗಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಹಾಗೆ ಮಾಹಿತಿ ಪಡೆದವರು ಬರುವಾಗ ಅಗ್ನಿಶಾಮಕ ದಳದವರನ್ನು ಹಾಗೂ ಈಜು ತಜ್ಞರನ್ನು ಕರೆದುಕೊಂಡು ಬಂದಿದ್ದಾರೆ. ಬರೋಬ್ಬರಿ 6 ತಾಸು ಕಾರ್ಯಾಚರಣೆ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಅಲ್ಲಿ ಯುವತಿಯನ್ನು ಮೊಸಳೆ ತಿಂದಿದೆ ಎನ್ನುವುದಕ್ಕೆ ಪೊಲೀಸರಿಗೆ ಯಾವ ಸಾಕ್ಷ್ಯವೂ ಸಿಕ್ಕಿರಲಿಲ್ಲ. ಇದರಿಂದ ಪೊಲೀಸರಿಗೆ ಅನುಮಾನ ಶುರುವಾಗಿತ್ತು.

“ಅಶ್ವಿನಿಯನ್ನು ಮೊಸಳೆ ಎಳೆದೊಯ್ದಿಲ್ಲ ಯಾರೊಂದಿಗೋ ಜೊತೆ ಓಡಿ ಹೋಗಿದ್ದಾಳೆ”
ಹೀಗಂತಾ ಅಶ್ವಿನಿ ಗೆಳತಿ ಚೆನ್ನಮ್ಮ ಹೇಳಿಕೆ ನೀಡುವ ಮೂಲಕ ಎಲ್ಲರನ್ನು ಒಂದು ಕ್ಷಣ ಅಚ್ಚರಿಗೊಳಿಸಿದಳು.ಇದೇ ವೇಳೆ ತನ್ನ ಸಂಬಂಧಿಕರೊಬ್ಬರ ಮೊಬೈಲ್‌’ಗೆ ಮೆಸೇಜ್ ಮಾಡಿ ಮೊಸಳೆ ನನಗೆ ಗಾಯಗೊಳಿಸಿದ್ದು, ನದಿಯ ದಡದಲ್ಲಿದ್ದೇನೆ. ಹುಡುಕಬೇಡಿ ಎಂದು ಅಶ್ವಿನಿ ಸಂದೇಶ ಕಳುಹಿಸಿದ್ದಾಳೆ.

ಇನ್ನೂ ಈ ಮೆಸೇಜ್’ನಿಂದ ಅಗ್ನಿಶಾಮಕ ಸಿಬ್ಬಂದಿ ಮುಳುಗುತಜ್ಞರು, ಶೋಧಕಾರ್ಯ ಕೈಬಿಟ್ಟು ವಾಪಸ್ ಹೋಗಿದ್ದಾರೆ. ಮುಂದಿನ ತಿಂಗಳು ಸೋದರ ಮಾವನ ಜೊತೆ ಅಶ್ವಿನಿಗೆ ಮದುವೆ ನಿಶ್ಚಯವಾಗಿತ್ತು. ಅಷ್ಟರಲ್ಲೇ ಅಶ್ವಿನಿ ಮೊಸಳೆ ಪ್ರಹಸನ ಮಾಡಿ ನಾಪತ್ತೆಯಾಗಿದ್ದಾಳೆ. ಆದರೆ ಎಲ್ಲಿದ್ದಾಳೆ? ಯಾರ ಜೊತೆ ಓಡಿಹೋಗಿದ್ದಾಳೆ ಎಂಬುದು ಇನ್ನು ಗೊತ್ತಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ನೆಲೋಗಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.