ಕರ್ನಾಟಕ

ಡಿಸಿಸಿ ಬ್ಯಾಂಕ್‍ನಲ್ಲಿ ವ್ಯವಹಾರಕ್ಕೆ ಅನುಮತಿ ಕೋರಿ ಪ್ರಧಾನಿಗೆ ದೇವೇಗೌಡ ಪತ್ರ

Pinterest LinkedIn Tumblr

devegowdaಬೆಂಗಳೂರು: ರೈತ ಸಮುದಾಯದ ಹಿತದೃಷ್ಟಿಯಿಂದ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ)ಗಳಲ್ಲೂ ಕೂಡ ಹಳೆ ನೋಟುಗಳ ಚಲಾವಣೆ ಮತ್ತು ಠೇವಣಿ ಸ್ವೀಕರಿಸಲು ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ನ. 14ರಂದು ಭಾರತೀಯ ರಿಸರ್ವ್ ಬ್ಯಾಂಕ್ ಕೃಷಿ ಸಾಲ ಮರುಪಾವತಿ ಸ್ವೀಕರಿಸದಂತೆ ಹೊರಡಿಸಿರುವ ಆದೇಶದಿಂದಾಗಿ ರೈತರಿಗೆ ತುಂಬಾ ತೊಂದರೆಯಾಗಿದೆ. ಈ ಕಾರಣದಿಂದ ಕೂಡಲೇ ಸುತ್ತೋಲೆಯನ್ನು ಮಾರ್ಪಾಡು ಮಾಡಬೇಕೆಂದು ಹಾಗೂ ತಾವು ಸೂಚಿಸುವಂತೆ ಪ್ರಧಾನಿಗೆ ಪತ್ರದಲ್ಲಿ ದೇವೇಗೌಡರು ಒತ್ತಾಯಿಸಿದ್ದಾರೆ. ವಾಣಿಜ್ಯ ಬ್ಯಾಂಕ್‍ಗಳು, ಖಾಸಗಿ ಬ್ಯಾಂಕ್‍ಗಳು, ನಗರ ಸಹಕಾರ ಬ್ಯಾಂಕ್‍ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ ರೀತಿಯಲ್ಲೇ ಡಿಸಿಸಿ ಬ್ಯಾಂಕ್‍ಗಳಿಗೂ ಸಹ ಹಳೆ ನೋಟುಗಳ ಚಲಾವಣೆ ಮತ್ತು ಠೇವಣಿ ಸ್ವೀಕರಿಸಲು ಅನುಮತಿ ನೀಡಬೇಕು. ಕರ್ನಾಟಕ ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳಿವೆ. 706 ಶಾಖೆಗಳಲ್ಲಿ 45.91 ಲಕ್ಷ ಠೇವಣಿ ಖಾತೆಗಳು ಹಾಗೂ 21.73 ಲಕ್ಷ ಸಾಲ ಖಾತೆಗಳಿವೆ. 20,256.44 ಕೋಟಿ ರೂ. ಮೊತ್ತದ ಮುಂಗಡ ಬಾಕಿ ಇದೆ ಎಂದು ಅಂಕಿ ಅಂಶ ನೀಡಿರುವ ಅವರು, ಆರ್‌ಬಿಐ ಸುತ್ತೋಲೆಯಿಂದ ರೈತರಿಗೆ ಉಂಟಾಗಿರುವ ಅಂಶಗಳನ್ನು ವಿವರಿಸಿದ್ದಾರೆ.ಅಸಂಖ್ಯಾತ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಬೆಳೆ ಸಾಲವನ್ನು ಪಡೆದಿದ್ದಾರೆ.
ನೋಟು ರದ್ಧತಿ ಮತ್ತು ನಂತರ ಹೊರಡಿಸಿದ ಸುತ್ತೋಲೆಯಿಂದಾಗಿ ಡಿಸಿಸಿ ಬ್ಯಾಂಕ್‍ಗಳಲ್ಲಿ ಸಾಲಗಳನ್ನು ಹಿಂದಿರುಗಿಸಲು ಕೃಷಿಕರಿಗೆ ಕಷ್ಟವಾಗುತ್ತಿದೆ. ನಿಗದಿತ ದಿನಾಂಕದೊಳಗೆ ಅವರು ಸಾಲ ಮರುಪಾವತಿ ಮಾಡಲು ವಿಫಲರಾದರೆ ಸರ್ಕಾರದಿಂದ ಬಡ್ಡಿ ಸಬ್ಸಿಡಿಗೆ ಬೆಳೆಗಾರರು ಅನರ್ಹರಾಗುತ್ತಾರೆ. ಇದೇ ರೀತಿಯ ಸಮಸ್ಯೆಯನ್ನು ಹಾಲು ಉತ್ಪಾದಕರು ಸಹ ಎದುರಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ 30 ಲಕ್ಷ ಸದಸ್ಯರನ್ನೊಳಗೊಂಡ 2 ಲಕ್ಷ ಸ್ವಸಹಾಯ ಗುಂಪುಗಳಿಗೆ ಇವರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸದಿದ್ದರೆ ಅವರಿಗೂ ಸಹ ಬಡ್ಡಿ ಸಹಾಯಧನ ಲಭಿಸುವುದಿಲ್ಲ. ಇದರಿಂದಾಗಿ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ. ಕಾಳಧನ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ತಾವು ಕೈಗೊಂಡಿರುವ ದಿಟ್ಟ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿರುವ ಅವರು, ಬಡವರು ಮತ್ತು ಕೆಳವರ್ಗದವರಿಗೆ ಅನಾನುಕೂಲವಾಗದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಅವರು ಸಲಹೆ ಮಾಡಿದ್ದಾರೆ.

Comments are closed.