ಹುಬ್ಬಳ್ಳಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಕಪ್ಪು ಹಣ ಹೊಂದಿರುವ ಕುಳಗಳಿಗೆ ದೊಡ್ಡ ತಲೆನೋವಾಗಿದ್ದು, ಸೋಮವಾರ ಕಾರಿನಲ್ಲಿ 60 ಲಕ್ಷ ರುಪಾಯಿ ನಗದು ಸಾಗಿಸುತ್ತಿದ್ದ ಇಬ್ಬರನ್ನು ಹುಬ್ಬಳಿಯ ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ.
ಕೇಶ್ವಾಪುರದ ಅರಿಹಂತ ನಗರದಿಂದ ಹೊಸಪೇಟೆಗೆ ಹಣ ಸಾಗಿಸುತ್ತಿದ್ದ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸ್ ಮೂರ್ತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 60 ಲಕ್ಷ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹಣದಲ್ಲಿ ರದ್ದಾದ 500 ಹಾಗೂ 1000 ರು. ಮುಖಬೆಲೆಯ ನೋಟುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳು ಹೊಸಪೇಟೆ ನಿವಾಸಿಗಳಾಗಿದ್ದು, ಪ್ರವೀಣ್ ಜೈನ್ ತನ್ನ ಬಳಿ ಇದ್ದ ಸುಮಾರು 60 ಲಕ್ಷ ರೂಪಾಯಿ ಕಪ್ಪುಹಣವನ್ನು ವೈಟ್ ಮನಿ ಮಾಡಿಕೊಳ್ಳಲು ಪರದಾಡುತ್ತಿದ್ದ. ಈ ಸಂದರ್ಭದಲ್ಲಿ ಜೈನ್ ಗೆ ಕಪ್ಪುಹಣವನ್ನು ಹುಬ್ಬಳ್ಳಿಯಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದು ವಿನಿಮಯ ಮಾಡಿಕೊಡುತ್ತಾರೆ ಎಂದು ಯಾರೋ ಮಾಹಿತಿ ಕೊಟ್ಟಿದ್ದರು.
ಆ ಮಾಹಿತಿ ನಂಬಿದ್ದ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸ್ ಮೂರ್ತಿ ಕಾರಿನಲ್ಲಿ 60 ಲಕ್ಷ ರೂಪಾಯಿ ಹಣವನ್ನು ಹುಬ್ಬಳ್ಳಿಯ ಅರಿಹಂತ್ ಬಡವಾಣೆಯಲ್ಲಿರುವ ತಮ್ಮ ಸಹೋದರಿ ಇರುವ ಬಡಾವಣೆಗೆ ತಂದಿದ್ದರು. ಆದರೆ ಹುಬ್ಬಳ್ಳಿಗೆ ಬಂದಾಗಲೇ ಅವರಿಗೆ ತಪ್ಪಿನ ಅರಿವಾಗಿದ್ದು, ಯಾರೂ ಕೂಡಾ ಕಪ್ಪು ಹಣ ಪಡೆದು, ವಿನಿಮಯ ಮಾಡಿಕೊಳ್ಳುತ್ತಿಲ್ಲ ಎಂಬುದು!
ಹೀಗೆ ಪರದಾಡುತ್ತಿದ್ದಾಗಲೇ 60 ಲಕ್ಷ ರುಪಾಯಿ ಕಪ್ಪು ಹಣದ ವಿಷಯ ಪೊಲೀಸರ ಕಿವಿಗೂ ತಲುಪಿತ್ತು. ಇದೀಗ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸ ಮೂರ್ತಿ ಕೇಶ್ವಾಪುರ ಪೊಲೀಸರ ಅತಿಥಿಯಾಗಿದ್ದಾರೆ.
Comments are closed.