ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ಫೋಟೋ ವೀಕ್ಷಿಸುತ್ತಿದ್ದ ಸಚಿವರ ದೃಶ್ಯ ಸೆರೆಹಿಡಿದಿದ್ದ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಚಿವ ತನ್ವೀರ್ ಸೇಠ್ ಅವರು ಈ ಬಗ್ಗೆ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 504 (ಉದ್ದೇಶ ಪೂರ್ವಕವಾಗಿ ಅವಮಾನ ಮಾಡುವುದು)ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬಿ ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಚಿವರ ಆದೇಶದ ಮೇರೆಗೆ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮೆನ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇಂದು ಸಚಿವ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಕರಣದ ಮಾಹಿತಿ ನೀಡಿದ್ದಾರೆ. ಇಂದು ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕಾವೇರಿಗೆ ಆಗಮಿಸಿದ ತನ್ವೀರ್ ಸೇಠ್ ಅವರು ತಾವು ಮೊಬೈಲ್ ನಲ್ಲಿ ಏನು ವೀಕ್ಷಿಸುತ್ತಿದ್ದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಬಳಿಕ ಮಾತನಾಡಿದ ಅವರು, ಪತ್ರಕರ್ತನ ವಿರುದ್ಧ ದೂರು ನೀಡಿಲ್ಲ. ಬದಲಿಗೆ ಪ್ರಕರಣದ ತನಿಖೆಗೆ ಸಹಕಾರಿಯಾಗಲೆಂದು ಸಂಪೂರ್ಣ ವಿಡಿಯೋವನ್ನು ತನಿಖಾಧಿಕಾರಿಗಳಿಗೆ ನೀಡುವಂತೆ ದೂರು ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ನು ಸಚಿವ ತನ್ವೀರ್ ಸೇಠ್ ಅವರ ಈ ವಿಡಿಯೋ ಪ್ರಸಂಗ ದೇಶವ್ಯಾಪಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಕೂಡ ಈ ಬಗ್ಗೆ ವರದಿ ಕೇಳಿದ್ದರು.
ಕರ್ನಾಟಕ
Comments are closed.