ರಾಯಚೂರು: ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡಿದ ಖಾಸಗಿ ವಾಹಿನಿ ಟಿವಿ9 ವಿರುದ್ಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೇಸ್ ದಾಖಲಿಸಿದ್ದಾರೆ.
ಘಟನೆಯ ವರದಿ ಮಾಡಿದ ಟಿವಿ9 ವರದಿಗಾರ ಸಿದ್ದು ಬೀರಾದಾರ್ ಮತ್ತು ಛಾಯಾಗ್ರಾಹಕ ದನಂಜಯ್ ಅವರ ವಿರುದ್ಧ ರಾಯಚೂರು ಪಶ್ಚಿಮ ಠಾಣೆಯಲ್ಲಿ ಸಚಿವರು ದೂರು ದಾಖಲಿಸಿದ್ದಾರೆ.
ತನ್ವೀರ್ ಸೇಠ್ ಎಪಿಎಸ್ ಸೆಕ್ಷನ್ 504ರ ಅಡಿಯಲ್ಲಿ ಟಿವಿ9 ವರದಿಗಾರ ಹಾಗೂ ಛಾಯಾಗ್ರಾಹಕನ ವಿರುದ್ಧ ಕೇಸ್ ದಾಖಲಿಸಿದ್ದು, ದೂರಿನಲ್ಲಿ ಸುದ್ದಿ ವಾಹಿನಿ ತನಗೆ ಅಪಮಾನ ಮಾಡುವ ರೀತಿಯಲ್ಲಿ ಸುದ್ದಿಯನ್ನು ಬೀತ್ತರಿಸಿದೆ ಎಂದು ಆರೋಪಿಸಿದ್ದಾರೆ.
ತನ್ವೀರ್ ಸೇಠ್ ಅವರು ರಾಯಚೂರಿನಲ್ಲಿ ನಡೆದ ಟಿಪ್ಪುಜಯಂತಿಯ ವೇಳೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದಾರೆ ಎಂಬ ದೃಶ್ಯದ ತುಣುಕುಗಳನ್ನು ಸುದ್ದಿವಾಹಿನಿ ಬಿತ್ತರ ಮಾಡಿತ್ತು. ಇದು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದ್ದು, ಸಚಿವರು ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿವೆ. ಆದರೆ ದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮಿಂದ ಯಾವುದೇ ತಪ್ಪು ಸಂಭವಿಸಿಲ್ಲ, ಹಾಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸೇಠ್ ಪ್ರತಿಕ್ರಿಯೆ ನೀಡಿದ್ದರು.