ಕರ್ನಾಟಕ

ಕುಮಾರಸ್ವಾಮಿಯಿಂದ ಆದಿಕರ್ನಾಟಕ ಜನಾಂಗಕ್ಕೆ ಸೇರಿದ 200 ಎಕರೆ ಭೂಕಬಳಿಕೆ

Pinterest LinkedIn Tumblr
S R Hiremath of Samaj Parivartana Samudaya.  Photo/GJ
S R Hiremath of 

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಸಂಬಂಧಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿಯಲ್ಲಿ 110 ಎಕರೆ ಗೋಮಾಳ, ಪರಿಶಿಷ್ಟರಿಗೆ ನೀಡಲಾದ ಏಳು ಎಕರೆ ಸೇರಿದಂತೆ ಒಟ್ಟು 200 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ ಹಿರೇಮಠ, ‘ಹಲವು ಪ್ರಕರಣಗಳಲ್ಲಿ ದಲಿತರನ್ನು ಹೆದರಿಸಿ, ಬೆದರಿಸಿ ಜಮೀನನ್ನು ಒತ್ತಾಯಪೂರ್ವಕವಾಗಿ ವಶಪಡಿಸಿಕೊಳ್ಳಲಾಗಿದೆ. ಈ 2014ರಲ್ಲಿ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ಅಂದಿನ ರಾಮನಗರ ಉಪವಿಭಾಗಾಧಿಕಾರಿ ಎಸ್‌. ನವೀನಕುಮಾರ್‌ ರಾಜು ಅವರು ಬಿಡದಿ ಹೋಬಳಿಯ ಕೇತಿಗಾನಹಳ್ಳಿಯ ಸರ್ವೆ ನಂಬರ್‌ 60ರಲ್ಲಿ 4.37 ಎಕರೆ, 62ರಲ್ಲಿ 2.11 ಎಕರೆ ಜಮೀನುಗಳನ್ನು ಪರಭಾರೆ ಮಾಡಿಕೊಂಡಿದ್ದಾರೆ. ವಾಸ್ತವವಾಗಿ ಈ ಜಮೀನು ಸರ್ಕಾರಿ ಗೋಮಾಳವಾಗಿತ್ತು. ಆ ನಂತರ ಪರಿಶಿಷ್ಟ ಜಾತಿಗೆ ಸೇರಿದ ನರಸಹೊಲಯ ಅವರಿಗೆ ನೀಡಲಾಗಿತ್ತು. ಆ ಜಮೀನನ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಎಚ್‌.ಡಿ. ದೇವೇಗೌಡ ಅವರ ನಾದಿನಿ ಸಾವಿತ್ರಮ್ಮ ಹನುಮೇಗೌಡ ಅವರಿಂದ ಎಚ್‌.ಡಿ. ಕುಮಾರಸ್ವಾಮಿ 2004ರಲ್ಲಿ ಪರಭಾರೆ ಮಾಡಿಸಿಕೊಂಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದವರೇ ದಲಿತರಿಗೆ ಸೇರಿದ ಭೂಮಿಯನ್ನು ಕಬಳಿಸಿದರೆ ಹೇಗೆ? ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ದೇವೇಗೌಡರ ಕುಟುಂಬ ಅಕ್ರಮವಾಗಿ ಭೂಕಬಳಿಕೆ ಮಾಡುವುದು ಹೊಸದೇನೂ ಅಲ್ಲ. 1987ರಲ್ಲಿ ದೇವೇಗೌಡರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿಯೂ ಕೇತಿಗಾನಹಳ್ಳಿಯಲ್ಲಿ ಅರ್ಧ ಎಕರೆ, ಒಂದು ಎಕರೆ ತುಂಡು ಭೂಮಿಗಳನ್ನು ಕಬಳಿಕೆ ಮಾಡಿದ ಬಗ್ಗೆ ಸಿ.ಎಂ. ಲಿಂಗಪ್ಪ ಎನ್ನುವವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿದ್ದರು. ಮಂಡ್ಯದ ರೈತ ಹೋರಾಟಗಾರ, ಮಾಜಿ ಸಂಸದ ಜಿ. ಮಾದೇಗೌಡ ಅವರೂ ಕೇತಿಗಾನಹಳ್ಳಿಯಲ್ಲಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಸಹೋದರ ಡಿ.ಸಿ. ನಂಜುಂಡಯ್ಯ ಭೂಕಬಳಿಕೆ ಮಾಡಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್‌ ಅಕ್ರಮದ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದ್ದರು. ಅದರನ್ವಯ ತನಿಖೆ ನಡೆಸಿ ಇದರಲ್ಲಿ ಎಚ್‌.ಡಿ. ಕುಮಾರಸ್ವಾಮಿ, ನಂಜುಂಡಯ್ಯ ಅವರು ಕಬಳಿಕೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದರು’ ಎಂದರು.

ಸುಮ್ಮನೆ ಕುಳಿತ ಜಿಲ್ಲಾಧಿಕಾರಿ: ಉಪವಿಭಾಗಾಧಿಕಾರಿಗಳು ಅಕ್ರಮ ನಡೆದ ಬಗ್ಗೆ ರಾಮನಗರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಸಮಗ್ರ ವರದಿ ತರಿಸುವಂತೆ ಕಳೆದ ಏಪ್ರಿಲ್‌ 29ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಆಗಸ್ಟ್‌ 17ರಂದು ಆಯುಕ್ತರು ರಾಮನಗರ ಜಿಲ್ಲಾಧಿಕಾರಿಗಳಿಗೆ ಎರಡು ನೆನಪೋಲೆಗಳನ್ನು ಕಳಿಸಿದ್ದಾರೆ. ಆದಾಗ್ಯೂ, ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಮಮತಾ ಅವರು ಮಾಹಿತಿ ನೀಡದೇ ತೆಪ್ಪಗೆ ಕುಳಿತಿದ್ದಾರೆ ಎಂದು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿ ವಾಪಸ್‌ ಮಾಡಿ ಹುಬ್ಬಳ್ಳಿಗೆ ಬನ್ನಿ
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದಾರೆ. ಮೊದಲು ದಲಿತರ ಭೂಮಿಯನ್ನು ಅವರಿಗೆ ಹಿಂತಿರುಗಿಸಿ ಆದ ತಪ್ಪನ್ನು ಸರಿಪಡಿಸಿಕೊಂಡು ಬನ್ನಿ. ಇಲ್ಲದಿದ್ದರೆ ಇಲ್ಲಿನ ಜನ ಕ್ಷಮಿಸುವುದಿಲ್ಲ ಎಂದು ಎಸ್‌.ಆರ್‌.ಹಿರೇಮಠ ತಾಕೀತು ಮಾಡಿದರು.

Comments are closed.