ಕರ್ನಾಟಕ

ಕಾಯಿಲೆಗಳನ್ನು ಖಂಡಿತವಾಗಿ ಗುಣಪಡಿಸುತ್ತೇವೆನ್ನುವ ಬೊಗಳೆಯೇ, ಬದಲಿ ಪದ್ಧತಿಗಳ ಜೀವಾಳ…… ನಿಜವೇ.

Pinterest LinkedIn Tumblr

spech_talk_bunk

ಮಂಗಳೂರು: ರಕ್ತದ ಏರೊತ್ತಡಕ್ಕೆಂದು ಚಿಕಿತ್ಸೆ ಪಡೆಯುತ್ತಿದ್ದ ನಲುವತ್ಮೂರರ ಯುವಕನೊಬ್ಬನಿಗೆ ಕಾವಿಯುಟ್ಟ, ಗಡ್ಡ ಬಿಟ್ಟ ಯೋಗ ಗುರುವಿನ ಆಕರ್ಷಣೆ. ಮಾರಕ ಆಕರ್ಷಣೆ. ‘ಒಂದೆರಡು ಆಸನಗಳು, ಒಂದಷ್ಟು ಉಸಿರಾಟದಿಂದ ಏರೊತ್ತಡ ಇಳಿಯುತ್ತದೆ, ಆಧುನಿಕ ಔಷಧಗಳೆಲ್ಲ ಅಪಾಯಕರ’ ಎಂಬ ಗುರುವಿನ ಉವಾಚವನ್ನು ನಂಬಿದ;.

ಮಾತ್ರೆಗಳನ್ನು ಬಿಟ್ಟು ನಸುಕಲ್ಲಿ ಆಸನಾಭ್ಯಾಸಕ್ಕೆ ತೊಡಗಿದ. ವಾರದಲ್ಲಿ ರಕ್ತದೊತ್ತಡ ದಿಢೀರನೆ ಏರಿ ಮಿದುಳಲ್ಲಿ ರಕ್ತಸ್ರಾವವಾಗಿ ಅಸುನೀಗಿದ. ಹಾಗೆಯೇ, ಸೋರಿಯಾಸಿಸ್ ಎಂಬ ಚರ್ಮರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದ ಹೋಮಿಯೋಪತಿಯವರಿಗೆ ಸಾವಿರಗಟ್ಟಲೆ ಚೆಲ್ಲಿ, ಕಾಹಿಲೆ ಉಲ್ಬಣಿಸಿದರೂ ಅದು ಗುಣವಾಗುವ ಲಕ್ಷಣ ಎನ್ನುವ ಬೊಗಳೆಯನ್ನು ನಂಬಿ, ಕೊನೆಗೆ ಚರ್ಮವೆಲ್ಲ ಕೆಂಪಾಗಿ ಕಿತ್ತೇಳಲಾರಂಭಿಸಿದಾಗ ಆಧುನಿಕ ವೈದ್ಯರಲ್ಲಿ ಬಂದು ‘ಈ ಕೂಡಲೇ ಗುಣ ಪಡಿಸಿ’ ಎಂದು ಕಿರುಚಾಡುವವರೂ, ಮೂಲಿಕೆಗಳ ಲೇಪದಿಂದ ಕ್ಯಾನ್ಸರ್ ಗುಣವಾಗುತ್ತದೆಂದು ನಂಬಿ ಗೆಡ್ಡೆಯನ್ನು ಕೊಳೆಯಿಸಿ ನರಳುವವರೂ ಸಾಕಷ್ಟಿದ್ದಾರೆ. ಕಾಂತದ ಬಳೆ, ಮಂತ್ರದ ನೂಲು, ಬೇರಿನ ನೀರು, ದನದ ಮೂತ್ರ ಮುಂತಾದವುಗಳಿಂದ ಚಿಕಿತ್ಸೆ ಸಾಧ್ಯವೆಂದು ನಂಬುವವರೂ ಇದ್ದಾರೆ.

ರಕ್ತದೊತ್ತಡ, ಮಧುಮೇಹ, ಉಬ್ಬಸ, ಸೊರಿಯಾಸಿಸ್, ಸಂಧಿವಾತಗಳು, ಕ್ಯಾನ್ಸರ್ ಇವೇ ಮುಂತಾದ ರೋಗಗಳನ್ನು ನಿಯಂತ್ರಿಸುವುದಕ್ಕೆ ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ತಡೆಯುವುದಕ್ಕೆ ವೈಜ್ಞಾನಿಕವಾಗಿ ಶ್ರುತಪಟ್ಟ ಅತ್ಯಾಧುನಿಕ ಚಿಕಿತ್ಸೆಗಳಿದ್ದರೂ ಕೆಲವರು ಪೊಳ್ಳು ಭರವಸೆಗಳನ್ನೇ ಹೆಚ್ಚು ನಂಬುವುದೇಕೆ? ಆಧುನಿಕ ತಂತ್ರಜ್ಞಾನದ ಮಾಂತ್ರಿಕರಲ್ಲೊಬ್ಬನಾದ ಸ್ಟೀವ್ ಜಾಬ್ಸ್ ನಂತಹವರು ಅತಿ ನೂತನ ವಿಧಾನದಿಂದ ಅತಿ ಬೇಗನೇ ಗುರುತಿಸಲಾದ ಕ್ಯಾನ್ಸರ್ ಗೆಡ್ಡೆಗೆ ಮೂಲಿಕೆಗಳ ಮೊರೆ ಹೋಗಿ ಪ್ರಾಣ ಕಳೆದುಕೊಳ್ಳುವುದೇಕೆ? ಬೊಗಳೆಗೆ ಇಷ್ಟೊಂದು ಬೆಲೆಯೇಕೆ?

ಕಾರಣಗಳು ಹಲವು. ಬಹಳಷ್ಟು ಜನರಿಗೆ ಆಧುನಿಕ ವೈದ್ಯ ವಿಜ್ಞಾನ ಹಾಗೂ ಬದಲಿ ಪದ್ಧತಿಗಳ ನಡುವಿನ ವ್ಯತ್ಯಾಸಗಳ ಅರಿವಿರುವುದಿಲ್ಲ. ಆಧುನಿಕ ವೈದ್ಯವಿಜ್ಞಾನವು ಸಾಕ್ಷ್ಯಾಧಾರಿತವಾಗಿದ್ದು, ರೋಗಗಳುಂಟಾಗುವ ಕಾರಣ ಮತ್ತು ಅವು ಬೆಳೆಯುವ ರೀತಿ, ರೋಗಗ್ರಸ್ತ ದೇಹದೊಳಗಾಗುವ ಬದಲಾವಣೆಗಳು ಮತ್ತು ರೋಗ ಲಕ್ಷಣಗಳು, ಅತಿ ಸೂಕ್ಷ್ಮವಾದ ಮಟ್ಟದಲ್ಲೂ ಅವನ್ನು ಗುರುತಿಸಬಲ್ಲ ಅತ್ಯಾಧುನಿಕ ವಿಧಾನಗಳು, ಅವಕ್ಕೆ ಸೂಕ್ತವಾದ ಔಷಧಗಳು ಮತ್ತವುಗಳ ಅಡ್ಡ ಪರಿಣಾಮಗಳು ಇತ್ಯಾದಿಗಳೆಲ್ಲವನ್ನೂ ಅಲ್ಲಿ ನಿರಂತರವಾಗಿ ಒರೆ ಹಚ್ಚಲಾಗುತ್ತದೆ. ಬದಲಿ ಚಿಕಿತ್ಸಾ ವಿಧಾನಗಳಾವುವೂ ಇಂತಹಾ ಕಠಿಣ ಪರೀಕ್ಷೆಗಳಲ್ಲಿ ಗೆದ್ದುದಿಲ್ಲ. ಇವನ್ನರಿಯದವರಿಗೆ ಯಾ ಈ ಬಗ್ಗೆ ತಲೆಕೆಡಿಸಿಕೊಳ್ಳದವರಿಗೆ ಎಲ್ಲಾ ವೈದ್ಯ ಪದ್ಧತಿಗಳೂ ಒಂದೇ ಎಂದನಿಸುತ್ತವೆ.

ವಿಪರ್ಯಾಸವೆಂದರೆ, ಆಧುನಿಕ ವೈದ್ಯವಿಜ್ಞಾನದ ಈ ಪಾರದರ್ಶಕ ನಡವಳಿಕೆಯೇ ತಿರುಗುಬಾಣವಾಗುತ್ತದೆ. ಆಧುನಿಕ ಚಿಕಿತ್ಸೆಯಲ್ಲಿ ಮುಕ್ತವಾಗಿ ದಾಖಲಿಸಲಾಗುವ ಅಡ್ಡ ಪರಿಣಾಮಗಳ ಬಗ್ಗೆ ಭಯಗೊಳ್ಳುವವರು ಬದಲಿ ಚಿಕಿತ್ಸೆಗೆ ಅಡ್ಡ ಪರಿಣಾಮಗಳೇ ಇಲ್ಲವೆಂಬ ಬೊಗಳೆಗಳತ್ತ ಸೆಳೆಯಲ್ಪಡುತ್ತಾರೆ. ಲಾಭದ ಹುಚ್ಚಿನಲ್ಲಿ ವೈದ್ಯ ವೃತ್ತಿಯ ಆದರ್ಶಗಳನ್ನು ಧೂಳೀಪಟ ಮಾಡುವ ವೈದ್ಯರು ಹಾಗೂ ದೈತ್ಯ ಕಂಪೆನಿಗಳೆಂಬ ಒಳವೈರಿಗಳಿಂದಾಗಿ ಆಧುನಿಕ ಚಿಕಿತ್ಸೆಯ ಬಗ್ಗೆ ಹೆಚ್ಚುತ್ತಿರುವ ಸಂಶಯಗಳು ಹಾಗೂ ಹೆದರಿಕೆಗಳು ಕೂಡಾ ಜನರನ್ನು ಬೊಗಳೆ ಚಿಕಿತ್ಸೆಯತ್ತ ದೂಡುತ್ತವೆ. ಆಧುನಿಕ ಚಿಕಿತ್ಸೆಯು ದುಬಾರಿಯೆನ್ನುವ ಭಾವನೆಯೂ, ಮಾರಣಾಂತಿಕವಾದ ಕಾಹಿಲೆ ಯಾ ಕಷ್ಟಕರ ಚಿಕಿತ್ಸೆಯೆಂಬ ಹತಾಶೆಗಳೂ ಬೊಗಳೆ ಚಿಕಿತ್ಸೆಗೆ ಕಾರಣಗಳಾಗಬಹುದು.

ಆದರೆ ಸ್ಟೀವ್ ಜಾಬ್ಸ್ ಗೆ ಬದಲಿ ಚಿಕಿತ್ಸೆಯ ಮೊರೆ ಹೋಗುವ ಅನಿವಾರ್ಯತೆ ಏನಿತ್ತು? ಐ ಫೋನ್ ಮೂಲಕ ತಂತ್ರಜ್ಞಾನವನ್ನು ಹೊಸ ಎತ್ತರಕ್ಕೇರಿಸಿದವನನ್ನು ಅಜ್ಞಾನಿಯೆನ್ನಲಾದೀತೇ? ಆಪಲ್ ಸ್ಥಾಪಕ ಕೋಟ್ಯಾಧಿಪತಿಗೆ ಹಣದ ಬರವಿತ್ತೇ? ಆಧುನಿಕ ಚಿಕಿತ್ಸೆಯ ಬಗ್ಗೆ ಅವನಿಗೆ ವಿಶ್ವಾಸವಿರಲಿಲ್ಲವೇ? ಜಾಬ್ಸ್ ಅಕ್ಟೋಬರ್ 2003ರಲ್ಲಿ ಮೂತ್ರಪಿಂಡಗಳ ಪರೀಕ್ಷೆಗಾಗಿ ಸ್ಕಾನ್ ಮಾಡಿಸಿದಾಗ ಆಕಸ್ಮಿಕವಾಗಿ ಮೇದೋಜೀರಕಾಂಗದಲ್ಲಿ ಕ್ಯಾನ್ಸರಿನ ಅತಿ ಸಣ್ಣ ಗೆಡ್ಡೆಯೊಂದು ಪತ್ತೆಯಾಗಿತ್ತು. ಸಣ್ಣ ಶಸ್ತ್ರಕ್ರಿಯೆಯಿಂದ ಅದನ್ನು ತೆಗೆಸಿ ಔಷಧೋಪಚಾರವನ್ನು ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದೆಂದು ವೈದ್ಯರು ಸಲಹೆಯಿತ್ತರು. ಜಾಬ್ಸ್ ಅದನ್ನು ನಿರ್ಲಕ್ಷಿಸಿದ್ದಲ್ಲದೆ, ಕುಟುಂಬದ ಸದಸ್ಯರು ಹಾಗೂ ಆಪ್ತ ಮಿತ್ರರು ಎಷ್ಟೇ ಗೋಗರೆದರೂ ಲೆಕ್ಕಿಸಲಿಲ್ಲ. ತಾನೇ ಅಂತರ್ಜಾಲದಲ್ಲಿ ಚಿಕಿತ್ಸೆಯನ್ನು ಹುಡುಕಿ ಅಕುಪಂಕ್ಚರ್, ಮೂಲಿಕೆಗಳು, ಹಣ್ಣಿನ ಪಥ್ಯ, ಕರುಳ ಶುದ್ಧಿ, ಅಧ್ಯಾತ್ಮ, ಅತೀಂದ್ರಿಯ ಚಿಕಿತ್ಸೆಗಳನ್ನೆಲ್ಲ ಪ್ರಯತ್ನಿಸಿ ಒಂಭತ್ತು ತಿಂಗಳು ಕಳೆದಾಗ ಕ್ಯಾನ್ಸರ್ ಉಲ್ಬಣಿಸಿ ಯಕತ್ತಿಗೂ ಹರಡಿ ಬಿಟ್ಟಿತು, ಆಧುನಿಕ ವೈದ್ಯರಲ್ಲಿಗೆ ಮರಳಿದ ಜಾಬ್ಸ್ ಗೆ ದೊಡ್ಡ ಶಸ್ತ್ರಕ್ರಿಯೆ ಮಾಡಬೇಕಾಯಿತು, ನಂತರ ಯಕತ್ತಿನ ಕಸಿಯೂ ಬೇಕಾಯಿತು. ಕೊನೆಗೆ ಅತ್ಯಾಧುನಿಕ ಚಿಕಿತ್ಸೆಗಳೆಲ್ಲವನ್ನೂ ಪ್ರಯತ್ನಿಸಲಾಯಿತಾದರೂ, ಆತ ಏಳು ವರ್ಷಗಳಿಗಿಂತ ಹೆಚ್ಚು ಉಳಿಯಲಿಲ್ಲ. ಜಾಬ್ಸ್ ಗೆ ತನ್ನ ತಪ್ಪಿನ ಅರಿವಾದಾಗ ಬಹಳ ತಡವಾಗಿತ್ತು. ತನ್ನ ಆತ್ಮಕಥೆಯಲ್ಲಿ ಆ ಬಗ್ಗೆ ಪರಿತಪಿಸಿರುವ ಜಾಬ್ಸ್, ಶಸ್ತ್ರಕ್ರಿಯೆಯಲ್ಲಿ ತನ್ನ ಹೊಟ್ಟೆಯನ್ನು ತೆರೆಯುವ ಬಗ್ಗೆ ಭಯಗೊಂಡು, ಅದನ್ನು ತಪ್ಪಿಸಲಿಕ್ಕಾಗಿ ಬದಲಿ ಚಿಕಿತ್ಸೆಗಳನ್ನು ಪ್ರಯತ್ನಿಸಿದೆನೆಂದು ಹೇಳಿಕೊಂಡಿದ್ದಾನೆ. ತನ್ನ ಕಂಪೆನಿಯಲ್ಲಿ ಎಲ್ಲವನ್ನೂ ತನಗನಿಸಿದಂತೆ ನಿಯಂತ್ರಿಸುತ್ತಿದ್ದ ಜಾಬ್ಸ್ ಗೆ ಕಾಹಿಲೆಯು ತನ್ನ ಹಿಡಿತದಲ್ಲಿಲ್ಲವೆನ್ನುವುದನ್ನು ಬಹುಷಃ ಒಪ್ಪಲಾಗಲಿಲ್ಲ; ತನ್ನ ಮನ ಬಂದಂತೆ ಅದನ್ನು ನಿಯಂತ್ರಿಸಬಹುದೆಂದುಕೊಂಡು ಅದರಲ್ಲಿ ವಿಫಲನಾದ. ಆಧುನಿಕ ಚಿಕಿತ್ಸಾ ವಿಧಾನಗಳನ್ನು ಸಂಶಯಿಸುವ ಮೇಧಾವಿಗಳಲ್ಲಿ ಜಾಬ್ಸ್ ಒಬ್ಬಂಟಿಯಲ್ಲ, ಅಂಥವರು ಬಹಳಷ್ಟಿದ್ದಾರೆ.

ಆಧುನಿಕ ಚಿಕಿತ್ಸೆಯ ಬಗ್ಗೆ ಸಂಶಯಗಳನ್ನೂ, ಹೆದರಿಕೆಗಳನ್ನೂ ಹರಡುವಲ್ಲಿ ಮತ್ತು ಪ್ರಭಾವಿತ ರೋಗಿಗಳನ್ನು ಆಕರ್ಷಿಸುವಲ್ಲಿ ಬೊಗಳೆ ವೈದ್ಯರ ಚಾಣಾಕ್ಷತೆ ಪಾರವಿಲ್ಲದ್ದು. ಆಧುನಿಕ ವೈದ್ಯ ವಿಜ್ಞಾನದ ಸಂಶೋಧನೆಗಳಿಂದ ಹೊರ ಹೊಮ್ಮುವ ಮಾಹಿತಿಯನ್ನೂ, ತಂತ್ರಜ್ಞಾನಗಳನ್ನೂ ತಮಗೆ ಬೇಕಾದಂತೆ ತಿರುಚಿ ಬಳಸಿಕೊಳ್ಳುವ ನೈಪುಣ್ಯ ಅವರಲ್ಲಿರುತ್ತದೆ. ವೈರಸ್, ಕೊಲೆಸ್ಟರಾಲ್, ಎಂಆರ್ ಐ, ಅಲ್ಟ್ರಾಸೌಂಡ್ ಮುಂತಾದ ಪದಗಳು ಅವರ ನಾಲಗೆ ತುದಿಯಲ್ಲಿ ಹೊರಳುತ್ತಿರುತ್ತವೆ.

ಯೋಗ ಕಲಿಸುವ ಕಾವಿಧಾರಿ ಅತ್ತ ಬಾಗಿಸಿ ಲಿವರ್. ಇತ್ತ ಬಾಗಿಸಿ ಸ್ಪ್ಲೀನ್, ಹಿಂದಕ್ಕೆ ಕಿಡ್ನಿ, ಮುಂದಕ್ಕೆ ಪಾಂಕ್ರಿಯಾಸ್, ಕತ್ತೆತ್ತಿ ಥೈರಾಯ್ಡ್, ಉಸಿರೆಳೆದು ಹಾರ್ಟು-ಲಂಗು ಅಂತೆಲ್ಲ ತೋರಿಸಿದೊಡನೆ ಎಂಥವರೂ ನಂಬುತ್ತಾರೆ; ಆರು ಆಸನಗಳಿಗೆ ಐನೂರು, ಹತ್ತು ಆಸನಗಳಿಗೆ ಏಳ್ನೂರೈವತ್ತು ಕೊಡುವುದಕ್ಕೂ ಸಿದ್ಧರಾಗುತ್ತಾರೆ! ಆದರೆ ಯೋಗಾಭ್ಯಾಸದಿಂದ ಯಾವುದೇ ರೋಗವನ್ನು ಗುಣ ಪಡಿಸಬಹುದೆಂಬುದಕ್ಕೆ ಸಾವಿರಾರು ಅಧ್ಯಯನಗಳಲ್ಲಿ ಒಂದಾದರೂ ಸಾಕ್ಷ್ಯ ದೊರೆತಿಲ್ಲವೆನ್ನುವುದನ್ನು ನೋಡುವುದಿಲ್ಲ. ಎಲ್ಲ ರೋಗಗಳಿಗೂ, ಬಂಜೆತನಕ್ಕೂ ಹೋಮಿಯೋಪತಿಯೇ ಶಾಶ್ವತ ಪರಿಹಾರವೆಂದು ದೊಡ್ಡ ಫಲಕಗಳಲ್ಲೂ, ರಿಕ್ಷಾ-ಬಸ್ಸುಗಳ ಹಿಂದು-ಮುಂದಲ್ಲೂ ಜಾಹೀರಾತುಗಳನ್ನಂಟಿಸಿದಾಗ ಸಾವಿರಗಟ್ಟಲೆ ಸುರಿಯುವವರು ದೊರೆಯುತ್ತಾರೆ. ಆದರೆ ಹೋಮಿಯೋಪತಿಯ ಗುಳಿಗೆಗಳಲ್ಲಿ ಔಷಧಾಂಶವಿದೆಯೆಂದು ಅಥವಾ ಅವುಗಳಿಂದ ಯಾವುದೇ ಕಾಹಿಲೆಗಳನ್ನು ಗುಣ ಪಡಿಸಬಹುದೆಂದು ಶ್ರುತಪಡಿಸಿದವರಿಗೆ ಅಮೆರಿಕಾದ ಜೇಮ್ಸ್ ರಾಂಡಿ ಮತ್ತು ಇಂಗ್ಲೆಂಡಿನ ಎನ್‌ಸ್ಟ್ ಹಾಗೂ ಸೈಮನ್ ಸಿಂಗ್ ಘೋಷಿಸಿರುವ ಹತ್ತು ಲಕ್ಷ ಡಾಲರ್ ಹಾಗೂ ಹತ್ತು ಸಾವಿರ ಪೌಂಡ್ ಬಹುಮಾನಗಳನ್ನು ಪಡೆಯಲು ಈ ಐದು ವರ್ಷಗಳಲ್ಲಿ ಯಾರೂ ಮುಂಬಂದಿಲ್ಲವೆನ್ನುವುದನ್ನು ಗಮನಿಸುವುದಿಲ್ಲ. ಗೋಮೂತ್ರದಿಂದ ಕ್ಯಾನ್ಸರ್ ಚಿಕಿತ್ಸೆ ಸಾಧ್ಯ ಎನ್ನುವ ಬೊಗಳೆ ಮುಖಪುಟಕ್ಕೇ ಹತ್ತುವಲ್ಲಿ ಆಧುನಿಕ ಚಿಕಿತ್ಸೆಯಿಂದ ಸಾವಿರಾರು ಕ್ಯಾನ್ಸರ್ ರೋಗಿಗಳು ಗುಣ ಹೊಂದುತ್ತಾರೆನ್ನುವ ಸತ್ಯವು ಸುದ್ದಿಯಾಗುವುದೇ ಇಲ್ಲ,

ಆಧುನಿಕ ಚಿಕಿತ್ಸೆಯ ಆಳ-ಅಗಲಗಳನ್ನು ಅಳೆಯುವ ಸಂಶಯದ ದೃಷ್ಟಿ ಬೊಗಳೆ ಚಿಕಿತ್ಸೆಗಳತ್ತ ತಿರುಗಬೇಕಾಗಿದೆ. ಆಧುನಿಕ ಚಿಕಿತ್ಸೆಯು ಪ್ರಶ್ನಾತೀತವಲ್ಲ; ಆದರೆ ಸಂಶಯಗಳನ್ನು ಪರಿಹರಿಸಿಕೊಳ್ಳಲು ಇನ್ನಷ್ಟು ಪರಿಣತರಾದ ಆಧುನಿಕ ವೈದ್ಯರನ್ನು ಕಾಣಬೇಕಲ್ಲದೆ, ಬದಲಿ ಬೊಗಳೆಗಳತ್ತ ಮುಖ ಮಾಡುವುದಲ್ಲ. ಆಧುನಿಕ ಚಿಕಿತ್ಸೆಯು ಸಾಕಷ್ಟು ಸಂಶೋಧನೆಗಳನ್ನೂ, ಅತ್ಯಾಧುನಿಕ ತಂತ್ರಜ್ಞಾನವನ್ನೂ ಒಳಗೊಳ್ಳುವುದರಿಂದ ವೆಚ್ಚದಾಯಕವಾಗಿರುವುದು ಸಹಜವಾದರೂ ಹೆಚ್ಚಿನ ಸಂದರ್ಭಗಳಲ್ಲಿ ಅದಕ್ಕೆ ಪರ್ಯಾಪ್ತವಾದ ವೈದ್ಯಕೀಯ ನೆರವು ಲಭ್ಯವಾಗುತ್ತದೆನ್ನುವುದನ್ನು ಮರೆಯಬಾರದು. ಆಧುನಿಕ ಚಿಕಿತ್ಸೆಯು ದುಬಾರಿಯೆನಿಸಿದರೆ, ಉಚಿತವಾಗಿ ಯಾ ರಿಯಾಯಿತಿಯಲ್ಲಿ ಚಿಕಿತ್ಸೆ ದೊರೆಯುವೆಡೆಗೆ ಹೋಗಬೇಕೇ ಹೊರತು ಔಷಧಾಂಶವೇ ಇಲ್ಲದ ಬದಲಿಗಳ ಬಳಿಗಲ್ಲ. ಆಧುನಿಕ ಔಷಧಗಳಲ್ಲಿ ಸತ್ಪರಿಣಾಮಗಳೇ ಹೆಚ್ಚಾಗಿದ್ದು, ದುಷ್ಪರಿಣಾಮಗಳು ಅತ್ಯಲ್ಪವೂ, ತಾತ್ಕಾಲಿಕವೂ ಆಗಿರುವುದರಿಂದ ಪರಿಣಾಮವನ್ನೇ ಬೀರದ, ದುಷ್ಪರಿಣಾಮಗಳ ಬಗ್ಗೆ ಮಾಹಿತಿಯೇ ಇಲ್ಲದ, ಬದಲಿಗಳನ್ನು ಅವಕ್ಕೆ ಹೋಲಿಸಲಾಗದು. ಯಾವುದೇ ಕಾಯಿಲೆಯನ್ನು ನಿಶ್ಶರ್ತವಾಗಿ, ಸಂಪೂರ್ಣವಾಗಿ ಗುಣಪಡಿಸುತ್ತೇನೆಂದು ಹೇಳುವವರಿಗೆ ಚಿಕ್ಕಾಸು ಕೊಡುವ ಮೊದಲು ಆ ಖಾತರಿಯನ್ನು ಬರೆಸಿಕೊಳ್ಳಲು ಮರೆಯಬೇಡಿ.

Comments are closed.