ಕರ್ನಾಟಕ

ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆ: ಆತ್ಮಹತ್ಯೆಗೈದ ವಿದ್ಯಾರ್ಥಿನಿ

Pinterest LinkedIn Tumblr

sucuideಬಾಗಲಕೋಟೆ: ಸಹಪಾಠಿಗಳ ಚುಚ್ಚು ಮಾತಿನಿಂದ ನೊಂದ ಪಿಯುಸಿ ವಿದ್ಯಾರ್ಥನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೂದಿಹಾಳ ಗ್ರಾಮದ 17 ವರ್ಷದ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಸ್ನೇಹಿತೆಯರ ವ್ಯಂಗ್ಯ ಮಾತುಗಳನ್ನು ಸಹಿಸಲಾಗದೇ ಲೇಡಿಸ್ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ. ವಿಜ್ಞಾನ ವಿಷಯದಲ್ಲಿ ಪಿಯುಸಿ ಓದುತ್ತಿದ್ದ ಅಕ್ಷತಾ ಬರೆದಿಟ್ಟ ಡೆತ್ ನೋಟ್ ಪ್ರಕಾರ ಈಕೆ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಎಸ್ಸೆಸೆಲ್ಸಿಯಲ್ಲಿ ಶೇ.95ರಷ್ಟು ಅಂಕ ಪಡೆದ ಈ ಹುಡುಗಿ ಎಂಬಿಬಿಎಸ್ ಓದಬೇಕೆಂದು ಗುರಿ ಇಟ್ಟುಕೊಂಡಾಕೆ. ಆದರೆ, ಸ್ನೇಹಿತೆಯರ ಚುಚ್ಚುಮಾತಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಆಕೆ ಬರೆದಿಟ್ಟ ಡೆತ್’ನೋಟ್’ನಿಂದ ತಿಳಿದುಬರುತ್ತಿದೆ.
“ಅಮ್ಮಾ ನಾನು ಈ ರೀತಿ ಮಾಡಿಕೊಳ್ಳೋಕೆ ಕಾರಣವೇನೆಂದರೆ ನನಗೆ ಹೆಣ್ಣಾಗಿ ಯಾಕೆ ಹುಟ್ಟಿದೆನೋ ಎನಿಸಿಬಿಟ್ಟಿದೆ. ಅದರಲ್ಲಿ ಈ ಹುಡುಗಿಯರದೊಂದು ಬರೆ ಹೆದರುವುದು, ಜಗಳವಾಡುವುದು ಇದೇ. ಇಂತಹವರ ನಡುವೆ ಓದಬೇಕೆಂದರೆ ಅದಕ್ಕೂ ಇವಳು ಏನು ಎಂಬಿಬಿಎಸ್ ಕಲಿಯುತ್ತಾಳೆಂದು ಚುಚ್ಚು ಮಾತುಗಳು. ಹಾಗೇ ನೀವು ಯಾರು ಜೊತೆಯಾಗುತ್ತಳೇ, ಅಕ್ಕಪಕ್ಕ ಊರಿನವರು ಎಂದು ಕಳಿಸಿದ್ದಿರೋ ಅವರು ಅಂತಹವರೇ ಒಳಗೊಂದು ಹೊರಗೊಂದು.. ಅಮ್ಮಾ ನನಗೆ ಇಂತಹ (ಬದುಕು) ಬದುಕೋಕೆ ಆಗಲ್ಲ. ಹಾಗೆ ನನಗೆ ಮೂರು ದಿನ ಹುಲಿಯಾಗಿ ಬದುಕಬೇಕು. ಇಲ್ಲದಿದ್ದರೆ ಇಲಿಯಾಗಿ ನೂರು ವರ್ಷ ಬದುಕಿದರೆ ಪ್ರಯೋಜನವಿಲ್ಲ. ನನ್ನ ಮೇಲೆ ನನಗೆ ಜಿಗುಪ್ಸೆಯಾಗಿ ಬಿಟ್ಟಿದೆ. ಬಂದು 4-5 ತಿಂಗಳಾಯಿತು. ಚೆನ್ನಾಗಿ ಮಾರ್ಕ್ಸ್ ತೆಗೆಯೋಕೂ ಆಗವಲ್ಲದಾಯಿತು. ನಾನೇನು ಓದಿಲ್ಲ ಅಂತಲ್ಲ. ಎಷ್ಟೋ ಕಷ್ಟಪಟ್ಟೆ. ನಿನಗೆ ಗೊತ್ತಲ್ಲ.. ನನಗೆ ಗದ್ದಲದಲ್ಲಿ ಕುಳಿತು ಓದಿದರೆ ತಲೆಗೆ ಹತ್ತಲ್ಲ ನನಗೆ…
ಅಮ್ಮಾ ಈ ಜಗತ್ತು ಎಷ್ಟು ಕೆಟ್ಟದ್ದು ಗೊತ್ತಾ. ಯಾರನ್ನೂ ಚೆನ್ನಾಗಿ ಇರೋಕೆ ಬಿಡೋದಿಲ್ಲ. ಅದರಲ್ಲಿ ನಾನು ಮೊದಲು ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು ಎಂಬುದಾಗಿ ಪತ್ರ ಬರೆದು ವಿದ್ಯಾರ್ಥಿನಿ ಅಕ್ಷತಾ ಸಾವಿಗೆ ಶರಣಾಗಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,

Comments are closed.