ಕರ್ನಾಟಕ

ಮಗುವಿಗೆ ಹಾಲು ತರಲು ಹೇಳಿದ್ದಕ್ಕೆ ಪತ್ನಿಗೆ ಕೊಳ್ಳಿ ಇಟ್ಟ!

Pinterest LinkedIn Tumblr

beಬೆಂಗಳೂರು: ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಕೂಡಾ ಇತ್ತು. ಆದ್ರೆ ಪ್ರೀತಿಸಿದವನು ಅವಳ ಬಾಳಿಗೆ ಕೊಳ್ಳಿ ಇಟ್ಟ. ಇಷ್ಟೆಲ್ಲಾ ಘಟನೆ ನಡೆದಿದ್ದು ಬೆಂಗಳೂರಿನ ಗೋರಿಪಾಳ್ಯದಲ್ಲಿ.

ನೋಡೋಕೆ ಯಾವ ಹೀರೋಯಿನ್‍ಗೂ ಕಡಿಮೆಯಿರದ ಈಕೆ ಮದುವೆಯಾಗಿದ್ದು ಮಾತ್ರ ಗೋರಿಪಾಳ್ಯದಲ್ಲಿ ಬೀದಿ ಬೀದಿ ಅಲೆಯೋ ತೌಸಿಫ್ ಪಾಷಾನನ್ನು. ಬೆಂಗಳೂರಿನ ಜೆಜೆ ನಗರದಲ್ಲಿರುವ ಗೋರಿಪಾಳ್ಯ ನಿವಾಸಿಗಳಾದ ಇವರು ಒಂದೇ ಏರಿಯಾದವರಾದ ಕಾರಣ ಕಳೆದ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಆರಂಭದಲ್ಲಿ ಇವರ ದಾಂಪತ್ಯ ಜೀವನ ಚೆನ್ನಾಗೇ ಇತ್ತು. ಆದರೆ ಇತ್ತೀಚೆಗೆ ಮಾತ್ರ ತೌಸೀಫ್ ಕೆಲಸ ಮಾಡೋದನ್ನು ಬಿಟ್ಟು ಕುಡಿತದ ಚಟಕ್ಕೆ ದಾಸನಾಗಿದ್ದ. ಹೀಗಾಗಿ ಸಂಸಾರ ನಡೆಸಲು ಸಾಧ್ಯವಾಗದ ಕಾರಣ ದಂಪತಿ ನಡುವೆ ಕಲಹಗಳು ನಡೀತಾ ಇತ್ತು.

ಸುಂದರ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಂದೂವರೆ ವರ್ಷದ ಮುದ್ದಾದ ಗಂಡು ಮಗುವೂ ಇತ್ತು. ಆದರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ದಂಪತಿ ಜಗಳದಲ್ಲಿ ಒಂದೂವರೆ ವರ್ಷದ ಕಂದಮ್ಮ ಹಸಿವಿನಿಂದ ನರಳುವ ಪರಿಸ್ಥಿತಿ ಎದುರಾಗಿತ್ತು. ಮಗುವಿನ ನರಳಾಟ ನೋಡಲಾಗದ ತಾಯಿ ಶಫೀನಾ ಸೋಮಾರಿ ಗಂಡ ತೌಸೀಫ್‍ಗೆ ಮಗೂಗೆ ಹಾಲು ತಂದು ಕೊಡಿ ಅಂತಾ ಹೇಳಿದ್ದೇ ತಪ್ಪಾಯ್ತು. ಕುಡಿದು ಮೂಲೆಯಲ್ಲಿ ಕೂತಿದ್ದ ತೌಸೀಫ್ ಹೆಂಡತಿಯ ಮಾತನ್ನು ಕೇಳಿ ಕೋಪಿಷ್ಠನಾಗಿ ಮನೆಯಲ್ಲಿದ್ದ ಸೀಮೆಎಣ್ಣೆ ತಂದು ಶಫೀನಾ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಫೀನಾಳನ್ನು ಸಂಬಂಧಿಕರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರು. ಕಳೆದ 2 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶಫೀನಾ ತನಗಾದ ನೋವನ್ನು ತಮ್ಮ ಸಂಬಂಧಿಕರ ಮುಂದೆ ಹೇಳಿದ್ದಾಳೆ. ಈ ಹೇಳಿಕೆಯನ್ನು ಸಂಬಂಧಿಕರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಶಫೀನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ.

ಇತ್ತ ಕಡೆ ಜೆಜೆ ನಗರ ಪೊಲೀಸರು ಕ್ರೂರಿ ಗಂಡ ತೌಫೀಕ್ ಪಾಷಾನ ಕೈಗೆ ಕೋಳ ತೊಡಿಸಿದ್ದಾರೆ. ಆದರೆ ಅಪ್ಪ ಅಮ್ಮನನ್ನೇ ನಂಬಿರುವ ಪ್ರಪಂಚದ ಜ್ಞಾನವನ್ನೇ ಅಡಿಯದ ಪುಟ್ಟ ಕಂದಮ್ಮ ಅನಾಥವಾಗಿದೆ.

Comments are closed.