ಕರ್ನಾಟಕ

ಪ್ರೀಯಾಮಣಿ ಜೀವನ ಗೊಂದಲಮಯವಾಗಿದೆಯಂತೆ….

Pinterest LinkedIn Tumblr

PRIYAMANI

ಬೆಂಗಳೂರು: ಪ್ರಿಯಾಮಣಿ ಜೀವನದಲ್ಲಿ ತಾನು ಈಗ ಯಾವ ಸಿನಿಮಾವನ್ನು ಹೆಚ್ಚು ಪ್ರಮೋಟ್ ಮಾಡಲಿ, ಯಾವುದನ್ನು ಬಿಡಲಿ ಎಂಬುದು, ಗೊಂದಲಮಯವಾಗಿದೆಯಂತೆ, ಅದಕ್ಕೆ ಕಾರಣ, ಪ್ರಿಯಾ ಮಣಿ ನಾಯಕಿಯಾಗಿ ನಟಿಸಿದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರೋದು. ಅದು ‘ದನ ಕಾಯೋನು’ ಹಾಗೂ ‘ಇದೊಳ್ಳೆ ರಾಮಾಯಣ’. ಈ ಎರಡೂ ಚಿತ್ರಗಳಲ್ಲೂ ಪ್ರಿಯಾಮಣಿ ನಾಯಕಿ. ಈ ಚಿತ್ರಗಳು ಅಕ್ಟೋಬರ್ 7 ರಂದು ಒಂದೇ ದಿನ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎರಡೂ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಪ್ರಿಯಾಮಣಿ ಪಾತ್ರಗಳು ಇಲ್ಲಿ ಭಿನ್ನವಾಗಿವೆಯಂತೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಯೋಗರಾಜ ಭಟ್ಟರ ‘ದನ ಕಾಯೋನು’ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ದಾಟಬೇಕಿತ್ತು. ಆದರೆ ಈಗ ಹಿಂದಿನಂತೆ ಭಟ್ಟರು ಅಂದುಕೊಂಡದ್ದೆಲ್ಲಾ ನಡೆಯುತ್ತಿಲ್ಲ.

ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರಿಗೆ ಸಿನಿಮಾವನ್ನು ಅರ್ಥೈಸಿ ಬಿಡುಗಡೆಯ ಹೊಸ್ತಿಲಿಗೆ ತರುವಲ್ಲಿಗೆ ಭಟ್ಟರು ಸುಸ್ತೋ ಸುಸ್ತು. ಅಂತಿಮವಾಗಿ ನೆಗಡಿ ಒರೆಸಿಕೊಂಡು ಎದ್ದ ದನಕಾಯೋನು ತಂಡ ಅಕ್ಟೋಬರ್ ೭ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇತ್ತ ಕಡೆ ಪ್ರಕಾಶ್ ರೈ ಕೂಡಾ ತಮ್ಮ ‘ಇದೊಳ್ಳೆ ರಾಮಾಯಣ’ ಚಿತ್ರವನ್ನು ಕೂಡಾ ಅದೇ ದಿನ ಬಿಡುಗಡೆ ಮಾಡುವ ಸಲುವಾಗಿ ಬೇಜಾನ್ ಪಬ್ಲಿಸಿಟಿ ಮಾಡುತ್ತಿದ್ದಾರೆ. ಮಲಯಾಳಂನ ‘ಶಟ್ಟರ್’ ಚಿತ್ರದ ರೀಮೇಕ್ ಆದ ‘ಇದೊಳ್ಳೆ ರಾಮಾಯಣ’ ಸಿನಿಮಾದಲ್ಲಿ ಪ್ರಿಯಾಮಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಈಗ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಪ್ರಿಯಾಮಣಿ ಯಾವುದರ ಬಗ್ಗೆ ಹೆಚ್ಚು ಮಾತನಾಡುತ್ತಾರೋ ಕಾದು ನೋಡಬೇಕು.

Comments are closed.