ಬೆಂಗಳೂರು, ಮೇ ೩೧- ಕನ್ನಡ- ತೆಲುಗು ಭಾಷೆಗಳ ಸೌಹಾರ್ಧಯುತ ಸಂಬಂಧ ಮುಂದುವರೆಸುವ ನಿಟ್ಟಿನಲ್ಲಿ ಸ್ಥಾಪಿತವಾದ ಕರ್ನಾಟಕ ತೆಲುಗು ಅಕಾಡೆಮಿ ನೀಡುವ ಡಾ. ಎನ್. ಟಿ. ರಾಮರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ರೆಬೆಲ್ ಸ್ಟಾರ್ ಡಾ. ಎಂ. ಎಚ್. ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ತೆಲುಗು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ಎ. ರಾಧಾಕೃಷ್ಣ ರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೮೪ರಲ್ಲಿ ಎನ್.ಟಿ. ರಾಮರಾವ್ ಅವರ ಆಶೀರ್ವಾದದೊಂದಿಗೆ ಆರಂಭವಾದ ಕರ್ನಾಟಕ ತೆಲುಗು ಅಕಾಡೆಮಿಯು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ ಅವರ ಕೃತಿಗಳನ್ನು ತೆಲುಗಿಗೆ ಹಾಗೂ ಡಾ. ಸಿ.ನಾರಾಯಣರೆಡ್ಡಿ ಅವರ ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ೨೦೦೭ ರಿಂದ ಡಾ. ಎನ್. ಟಿ. ಆರ್. ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು, ಈ ಬಾರಿ ಪ್ರಶಸ್ತಿಗೆ ಅಂಬರೀಶ್- ಸುಮಲತಾ ದಂಪತಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ಆರ್. ವಿ. ಹರೀಶ್ ಮಾತನಾಡಿ, ಇದೇ ಜೂನ್ ೨ ರಂದು ಸಂಜೆ ೬.೩೦ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಎನ್.ಟಿ.ಆರ್. ೯೪ ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರದ ಕಾನೂನು ಸಚಿವ ಡಿ. ವಿ. ಸದಾನಂದಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರದ ಮಾಜಿ. ಸಚಿವೆ ಡಿ.ಪುರಂದೇಶ್ವರಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.
ರಾಜ್ ಪ್ರಶಸ್ತಿ ಪ್ರದಾನ: ಮುಂದಿನ ವರ್ಷದಿಂದ ಎನ್.ಟಿ. ಆರ್ ಪ್ರಶಸ್ತಿ ಜತೆ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನೂ ಕಲಾವಿದರಿಗೆ ವಿತರಿಸಲು ಉದ್ದೇಶಿಸಲಾಗಿದೆ ಎಂದು ರಾಧಾಕೃಷ್ಣ ರಾಜು ಹೇಳಿದರು.
ಕರ್ನಾಟಕ
Comments are closed.