ಬೆಂಗಳೂರು: ಐಪಿಎಲ್ ನಲ್ಲಿ ನಾವು ಆಡಿರುವ ಒತ್ತಡದ ಪಂದ್ಯಗಳಲ್ಲಿ ನಿಜಕ್ಕೂ ಗುಜರಾತ್ ವಿರುದ್ಧದ ಪಂದ್ಯ ರೋಚಕ. ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ನಿಜಕ್ಕೂ ಶ್ರೇಷ್ಠ ಆಟಗಾರ ಎಂದು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ತಂಡವನ್ನು ಏಕಾಭಿಮುಖನಾಗಿ ಗೆಲುವಿನ ದಡ ಮುಟ್ಟಿಸಿದ್ದು, ಎಬಿಡಿ ವಿಲಿಯರ್ಸ್ ಮತ್ತು ನನ್ನ ನಡುವೆ ಯಾರು ಶ್ರೇಷ್ಠರು ಎಂಬ ಪ್ರಶ್ನೆಗೆ ನಿನ್ನೆ ಉತ್ತರ ಸಿಕ್ಕಿದೆ. ನಾನು ಎಬಿಡಿಗೆ ತಲೆ ಬಾಗುವೆ. ನಮ್ಮ ಅಗ್ರ ಕ್ರಮಾಂಕ ಕೈಕೊಟ್ಟರೂ ಎಬಿಡಿ ಎದುರಾಳಿಗಳಿಗೆ ಸವಾಲಾಗಿ ನಿಂತರು ಎಂದು ಕೊಹ್ಲಿ ಎಬಿಡಿಯನ್ನು ಪ್ರಶಂಸಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿಲಿಯರ್ಸ್ 47 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ತಂಡ ನಿಗದಿತ ಓವರ್ ನಲ್ಲಿ 10 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತ್ತು. 159 ರನ್ ಗಳ ಗುರಿ ಬೆನ್ನಟ್ಟಿದ ಆರ್ಸಿಬಿ 18.2 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತ್ತು.
Comments are closed.