ಯಳಂದೂರು: ಪತಿ ಅವರ ಅತ್ತಿಗೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಬೇಸತ್ತ ಮಹಿಳೆಯೊಬ್ಬಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಅಂಬಳೆ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಅಂಬಳೆ ಗ್ರಾಮದ ನಿವಾಸಿ ಚಂದ್ರು ಪತ್ನಿ ಕಾವ್ಯ(22) ಮೃತ ಮಹಿಳೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದವಾಡಿ ಗ್ರಾಮದಿಂದ ಅಂಬಳೆ ಗ್ರಾಮದ ಚಂದ್ರು ಜತೆ ಒಂದುವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಒಂದು ವರ್ಷದಿಂದ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, 6 ತಿಂಗಳಿಂದ ಪತಿ ತನ್ನ ಅತ್ತಿಗೆ ಜತೆ ಅನೈತಿಕ ಸಂಬಂಧ ಇದೆ ಎಂಬ ವಿಷಯ ತಿಳಿದು ಬಂದಿತ್ತು. ತನ್ನ ಪತಿಗೆ ಬುದ್ದಿ ಹೇಳಿದ ನಂತರವೂ ಮುಂದಯವರೆಸಿದ ಕಾರಣ ಬೇಸತ್ತ ಮಹಿಳೆ ಆತ್ಮ ಹತ್ಯೆಗೆ ಶರಣಾಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಮೃತಳ ತಂದೆ ಹಾಗೂ ಕುಟುಂಬ ವರ್ಗದವರು ಅಂಬಳೆ ಗ್ರಾಮಕ್ಕೆ ತೆರಳಿ ತನ್ನ ಅಳಿಯನ ಮನೆಯ ಕಿಟಕಿ ಬಾಗಿಲು ಹೊಡೆದು ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳೆನ್ನೆಲ್ಲಾ ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತಳ ತಂದೆ ಪ್ರಭುಸ್ವಾಮಿ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತಳ ಪತಿ ಹಾಗೂ ವಾರಗಿತ್ತಿ ತಲೆ ಮರೆಸಿಕೊಂಡಿದ್ದಾರೆ.
Comments are closed.