ವಿಜಯಪುರ: ಬೇಸಿಗೆ ಝಳ ತಾಳಲಾರದೇ ಹೊಂಡದಲ್ಲಿ ಈಜಲು ಹೋದ ಬಾಲಕರೊಂದಿಗೆ ಸಿಐಎಸ್ಎಫ್ ಸಿಬ್ಬಂದಿಯೊಬ್ಬ ಅಮಾನವೀಯವಾಗಿ ವರ್ತಿಸಿದ್ದು, ಆತನ ಬೆನ್ನ ಮೇಲೆ ಕಾಲಿಟ್ಟು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾನೆ.
ವಿಜಯಪುರ ಜಿಲ್ಲೆಯ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ (ಎನ್ಟಿಪಿಪಿ) ಹೊಂಡದಲ್ಲಿ ಭಾನುವಾರ ಕೆಲ ಬಾಲಕರು ಗುಂಪುಗೂಡಿ ಈಜಲು ಹೋಗಿದ್ದರು. ಇದನ್ನು ಕಂಡ ಸಿಬ್ಬಂದಿ ಬಾಲಕರನ್ನು ಹೊರ ಕರೆದು ಪುಶ್ಅಪ್ಸ್ ಮಾಡಲು ಹೇಳಿದ್ದಾನೆ. ಈ ವೇಳೆ ಬಾಲಕನ ಮೈ ಮೇಲೆ ಬೂಟುಗಾಲನ್ನು ಇಡುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ. ಸ್ಥಳೀಯರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ವಾಟ್ಸಾಪ್ನಲ್ಲಿ ಹರಿಯ ಬಿಟ್ಟಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸಿಐಎಸ್ ಎಫ್ ಯೋಧನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಆ ಯೋಧನನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಈ ವರೆಗೂ ಘಟನೆ ಸಂಬಂಧ ಬಾಲಕರು ಯಾವುದೇ ದೂರು ನೀಡಿಲ್ಲ.