ಬೆಂಗಳೂರು: ತಾಂಜಾನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣ ಈಗ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ನಡುವೆ ಘರ್ಷಣೆ ಇದೇ ಮೊದಲಲ್ಲ.
ಈ ಹಿಂದೆ ಕುಡಿದ ಮತ್ತಿನಲ್ಲಿ ಗಲಾಟೆ, ಕ್ಷುಲ್ಲಕ ವಿಚಾರದಲ್ಲಿ ಪೊಲೀಸರ ಮೇಲೆಯೇ ಹಲ್ಲೆ, ಬಸ್ ಪಾಸಿನ ವಿಚಾರದಲ್ಲಿ ಕಂಡಕ್ಟರ್ಗೆ ಥಳಿತ, ಅಪಘಾತದಲ್ಲಿ ಚಿಕಿತ್ಸೆಗೆ ಒತ್ತಾಯಿಸಿದ್ದಕ್ಕಾಗಿ ಹಲ್ಲೆ ಹೀಗೆ ಪ್ರಕರಣಗಳ ಪಟ್ಟಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಸ್ಥಳೀಯ ಕಾನೂನು ಉಲ್ಲಂ ಸಿ ಕೆಲ ವಿದೇಶಿ ವಿದ್ಯಾರ್ಥಿಗಳು, ಅಕ್ರಮ ಚಟುವಟಿಕೆಯಲ್ಲಿ ತೊಡಗುವುದು, ಕಾನೂನು ಬಾಹಿರವಾಗಿ “ಆಶ್ರಯ’ ಪಡೆದಿರುವಂತಹ ಸಂಗತಿ ಪೊಲೀಸರ ತನಿಖೆಯಲ್ಲೇ ಬೆಳಕಿಗೆ ಬಂದಿದೆ. ಆದರೆ, ಈ ಪುಂಡಾಟಿಕೆಗಳಿಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ.
520 ಮಂದಿ ಅಕ್ರಮ ನಿವಾಸಿಗಳು
ಕೆಲ ದಿನಗಳ ಹಿಂದೆ ಹೋಟೆಲ್ವೊಂದರಲ್ಲಿ ವರ್ತೂರು ಹಾಗೂ ಬೈರತಿ ಗ್ರಾಮದಲ್ಲಿ ಸ್ಥಳೀಯರು ಹಾಗೂ ಆಫ್ರಿಕಾಖಂಡದ ವಿದ್ಯಾರ್ಥಿಗಳ ದೊಡ್ಡ ಮಟ್ಟದ ಗಲಾಟೆಯಾಯಿತು. ಈ ಘಟನೆ ಬಳಿಕ ಪೊಲೀಸರು, ಅಕ್ರಮ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಪೊಲೀಸ್ ಇಲಾಖೆಯನ್ನೇ ಚಕಿತಗೊಳಿಸಿತು. ಸುಮಾರು 520 ಮಂದಿ ಅಕ್ರಮ ವಾಸಿಗಳು ಪತ್ತೆಯಾಗಿದ್ದರು. ಕೊನೆಗೆ ಈ ಅಕ್ರಮವಾಗಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ಗಡಿಪಾರಿಗೆ ವರದಿಯೊಂದನ್ನು ವಿದೇಶಾಂಗ ಪ್ರಾದೇಶಿಕ ಕಚೇರಿಗೆ ಸಲ್ಲಿಕೆಯಾಗಿತ್ತು.
ಇದಕ್ಕೆ ಪೂರಕವಾಗಿ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ, ವಿದೇಶಿ ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ನೂರಾರು ವಿದೇಶಿ ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದರೂ ನೆಲೆಯೂರಿರುವುದು ಕಂಡು ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ.
ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಆಗಮಿಸುವ ಆಫ್ರಿಕಾ ಖಂಡದ ವಿದ್ಯಾರ್ಥಿಗಳು, ನಗರದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ. ಕಾಲ ಕ್ರಮೇಣ ಕೆಲ ವಿದ್ಯಾರ್ಥಿಗಳು, ಹಣ ಸಂಪಾದನೆಗೆ ಅಡ್ಡಹಾದಿ ತುಳಿಯುತ್ತಾರೆ. ನಂತರ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಮಾದಕವಸ್ತು ಮಾರಾಟ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ಕೆಲವರು ತೊಡಗುತ್ತಾರೆ. ಆನ್ಲೈನ್ ವಂಚನೆಗೆ “ನೈಜೀರಿಯಾ’ ಕುಖ್ಯಾತಿ ಪಡೆದಿರುವುದೇ ಇದಕ್ಕೆ ಕನ್ನಡಿ ಹಿಡಿಯುತ್ತದೆ.
ಇನ್ನು ಕೆಲವರು ಪ್ರವಾಸ ಹಾಗೂ ಔದ್ಯೋಮಿಕ ವೀಸಾದಡಿ ಸಹ ಬಂದು ನೆಲೆಸಿದ್ದಾರೆ. ಆದರೆ ವೀಸಾದ ಅವಧಿ ಮುಗಿದ ನಂತರ ಮತ್ತೆ ತಾಯ್ನಾಡಿಗೆ ಮರಳದೆ ಕಾನೂನುಬಾಹಿರವಾಗಿ ನಗರದಲ್ಲಿ ಆಶ್ರಯ ಪಡೆದು, ನಿರಾತಂಕವಾಗಿ ಕಾನೂನುಬಾಹಿರ ಕೃತ್ಯಕ್ಕಿಳಿದಿದ್ದಾರೆ.
ಮಾದಕವಸ್ತುಗಳ ಮಾರಾಟ, ವೇಶ್ಯಾವಾಟಿಕೆ ದಂಧೆ ಹಾಗೂ ಆನ್ಲೈನ್ ವಂಚನೆ ಹೀಗೆ ಹಲವು ಅಪರಾಧ ಕೃತ್ಯಗಳಲ್ಲಿ ಕೆಲ ವಿದೇಶಿಯರು ಆರೋಪಿಗಳಾಗಿದ್ದಾರೆ. ಈ ವಿದೇಶಿಯರ ಪೈಕಿ ನೈಜೀರಿಯಾ, ತಾಂಜೇನಿಯಾ, ಐವರಿ ಕೋಸ್ಟಾ, ಉಂಗಾಡ ಸೇರಿದಂತೆ ಆಫ್ರಿಕಾ ಖಂಡದ ಕೆಲ ವಿದ್ಯಾರ್ಥಿಗಳ ಪುಂಡಾಟಿಕೆ ಅಂಕುಶ ಇಲ್ಲದಂತಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರ ಗಂಭೀರ ಆರೋಪ.
ಮಾದಕ ವಸ್ತು ಕುಖ್ಯಾತಿ
ಆಫ್ರಿಕಾ ಖಂಡದ ವಿದ್ಯಾರ್ಥಿಗಳು ವಿಪರೀತವಾಗಿ ಮಾದಕವಸ್ತು ವ್ಯಸನಿಗಳು. ತಡರಾತ್ರಿ ಮದ್ಯ ಮತ್ತು ಮಾದಕವಸ್ತು ಸೇವಿಸಿ ರಸ್ತೆಗಿಳಿಯುವ ಆ ವಿದ್ಯಾರ್ಥಿಗಳು, ರಸ್ತೆಯಲ್ಲಿ ಮನಬಂದಂತೆ ವಾಹನ ಚಾಲನೆ ಮಾಡಿ ಗದ್ದಲವೆಬ್ಬಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಲು ಹೋದ ಪೊಲೀಸರ ಮೇಲೆ ಅವರು ಗಲಾಟೆ ಮಾಡಿದ ನಿರ್ದಶನಗಳಿವೆ. ಇನ್ನು ಮಾದಕ ವಸ್ತು ಮಾಫಿಯಾ ಜತೆ “ಸಂಪರ್ಕ’ದಲ್ಲಿರು ಕೆಲವರು, ನಗರದ ಕೆಲ ಪ್ರತಿಷ್ಠಿತ ಕಾಲೇಜುಗಳು ಹಾಗೂ ಐಟಿ-ಬಿಟಿ ವಲಯದಲ್ಲಿ ಮಾದಕವಸ್ತುಗಳ ಮಾರಾಟ ಜಾಲ ವಿಸ್ತರಣೆಗೂ ಸಹಕರಿಸಿದ್ದಾರೆ.
ಇನ್ನು ವ್ಯವಸ್ಥಿತ ಜಾಲವಾಗಿ ಕಾರ್ಯನಿರ್ವಹಿಸುವ ಅವರು, ಗೋವಾ ಹಾಗೂ ಮುಂಬೈ ಸೇರಿದಂತೆ ಬೇರೆಡೆಯಿಂದ ಮಾದಕ ವಸ್ತುವನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಲ್ಲಿ ಮಾದಕ ವಸ್ತು ಮಾರಾಟದ ಆರೋಪದಡಿಯಲ್ಲಿ 10 ಮಂದಿ ಬಂಧನವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ.
ನೆಲೆ ಎಲ್ಲೆಲ್ಲಿ?
ಬಾಣಸವಾಡಿ, ವರ್ತೂರು, ಹೆಣ್ಣೂರು, ಬೈರತಿ, ಕೆ.ಆರ್.ಪುರ, ರಾಮಮೂರ್ತಿ ನಗರ ಹಾಗೂ ಕೊತ್ತನೂರು ಭಾಗಗಳಲ್ಲಿ ಆಫ್ರಿಕಾಖಂಡ ಜನರ ಉಪಟಳ ಹೆಚ್ಚಿದೆ ಎಂದು ಪೊಲೀಸರು ಗುರುತಿಸಿದ್ದಾರೆ. ಇಲ್ಲಿ ಸ್ಥಳೀಯರಿಗೆ ಪ್ರವೇಶ ಅಲಿಖೀತ ನಿರ್ಬಂಧವಿದೆ. ಸೂರ್ಯೋಸ್ತದ ನಂತರ ಆ ಪ್ರದೇಶದಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ. ವಿದೇಶಿ ವಿದ್ಯಾರ್ಥಿಗಳ ಸ್ವೇಚ್ಛಾರದ ವರ್ತನೆಗಳಿಗೆ ಮಿತಿ ಇಲ್ಲ ಎಂದು ಸಾರ್ವಜನಿಕ ಆರೋಪ.
ಎಷ್ಟೆಷ್ಟು ಪ್ರಕರಣಗಳು?
ವರ್ಷ ಪ್ರಕರಣ ಬಂಧನ
2015 2 8
2014 6 14
2013 3 3
ಒಟ್ಟು 9 24
ಕೆಲ ಹಿಂದಿನ ಘಟನೆಗಳ ಮೆಲುಕು
2015, ಮಾರ್ಚ್ 12- ಕೊತ್ತನೂರು ಸಮೀಪದ ಬೈರತಿಯಲ್ಲಿ ರಸ್ತೆಯಲ್ಲಿ ರಾತ್ರಿ ವೇಳೆ ಕುಡಿದ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಆಫ್ರಿಕಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಮಧ್ಯೆ ಗಲಾಟೆಯಾಗಿತ್ತು.
2015, ಜುಲೈ 3- ಬಸ್ ಪಾಸ್ ಕೇಳಿದಕ್ಕೆ ಕೋಪಗೊಂಡು ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ಮುಂಭಾಗ ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ನಿರ್ವಾಹಕ ಹಾಗೂ ಚಾಲಕನ ಮೇಲೆ ಆಫ್ರಿಕಾ ರಾಷ್ಟ್ರದ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದರು.
2015, ಅಕ್ಟೋಬರ್- ಬಾಗಲೂರು ಸಮೀಪ ಬೈಕ್ಗೆ ಅಫಿಕಾ ವಿದ್ಯಾರ್ಥಿ ಕಾರು ಡಿಕ್ಕಿಯಾಗಿ, ದಂಪತಿ ಗಾಯಗೊಂಡಿದ್ದರು. ಆದರೆ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸದೆ ತೆರಳುತ್ತಿದ್ದನ್ನು ಪ್ರಶ್ನಿಸಿದಕ್ಕೆ ಸಾರ್ವಜನಿಕರ ಮೇಲೆ ವಿದ್ಯಾರ್ಥಿಗಳು ಸಂಘರ್ಷಕ್ಕಿಳಿದಿದ್ದರು.
ವೀಸಾ ಅವಧಿ ಮುಗಿದ ನಂತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕೆಲ ವಿದೇಶಿ ವಿದ್ಯಾರ್ಥಿಗಳ ಪತ್ತೆ ಹಚ್ಚಿ ನಗರದಿಂದ ಹೊರ ಕಳುಹಿಸಬೇಕು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.
– ಡಿ.ವಿ.ಸದಾನಂದ ಗೌಡ, ಕೇಂದ್ರ ಕಾನೂನು ಸಚಿವ
ಈ ನೆಲದ ಕಾನೂನಿಗೆ ವಿದೇಶಿಯರು ಸಹ ಗೌರವ ಕೊಡಬೇಕು. ಹಾಗೆಯೇ ವಿದೇಶಿಯರ ರಕ್ಷಣೆಗೆ ನಮ್ಮ ಹೊಣೆಗಾರಿಕೆಯಾಗಿದೆ. ಆದರೆ ದುಂಡಾವರ್ತನೆ ತೋರುವ, ಅಕ್ರಮ ಕೃತ್ಯಗಳಲ್ಲಿ ನಿರತವಾಗಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ
– ಡಾ.ಜಿ.ಪರಮೇಶ್ವರ, ಗೃಹ ಸಚಿವ
-ಉದಯವಾಣಿ