ಮಂಗಳೂರು : ಹಿರಿಯ ಪತ್ರಕರ್ತ ಚಿದಂಬರ್ ಬೈಕಂಪಾಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ 2015ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಚಿದಂಬರ್ ಅವರ ನಿವಾಸಕ್ಕೆ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ನೇತೃತ್ವದ ತಂಡ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ವಿಜಯಲಕ್ಷ್ಮಿ ಆರಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
80 ಮತ್ತು 90ರ ದಶಕದಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿದ ಚಿದಂಬರ್ ಬೈಕಂಪಾಡಿ ಕರಾವಳಿಯ ಸಾಮಾಜಿಕ ತಲ್ಲಣಗಳನ್ನು ತೆರೆದಿಟ್ಟರು. ಕನ್ನಡ ಪ್ರಭದ ಕೋಲ್ಯ ಎಂಬ ಕಾಲ್ಪನಿಕ ವ್ಯಕ್ತಿಯನ್ನು ಪರಿಚಯಿಸಿದ ಅವರು, ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ನಾಡಿಗೆ ಪರಿಚಯಿಸಿಕೊಟ್ಟರು.
ದೃಶ್ಯ ಮಾಧ್ಯಮದಲ್ಲೂ ತಮ್ಮದೇ ಛಾಪನ್ನು ಮೂಡಿಸಿರುವ ಚಿದಂಬರ್, ಸ್ಥಳೀಯ ವಾಹಿನಿಯಲ್ಲಿ ಸುದ್ದಿಗೊಂದು ಗುದ್ದು ಎಂಬ ಅಂಕಣದಿಂದ ಮನೆ ಮಾತಾಗಿದ್ದರು. ಮುಂಗಾರಿನ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿ, ಪಾ.ಗೋ ಕುರಿತು ಅಂಕಣ ಹಾಗೂ ಪುಸ್ತಕಗಳು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ. ಬಂಡಾಯ ಸಾಹಿತ್ಯದಲ್ಲೂ ಕೈಯಾಡಿಸಿರುವ ಅವರು, ಕಪ್ಪು ಹುಡುಗ ಸೇರಿದಂತೆ ಅನೇಕ ಕವನ ಸಂಕಲನ ಮತ್ತು ಸಣ್ಣ ಕಥೆಗಳನ್ನು ರಚಿಸಿದ್ದಾರೆ.