ಬೆಳಗಾವಿ: ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಪ್ರಸಿದ್ಧ ಸ್ಥಳಗಳು ಹಾಗೂ ಕೇಂದ್ರಗಳಿಗೆ ಕೆಂಪೇಗೌಡರ ಹೆಸರಿಡುವುದಕ್ಕೆ ನಾಡೋಜ ಪಾಟೀಲ ಪುಟ್ಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರ, ಬೆಂಗಳೂರನ್ನು ಆಳಿದ ಕೆಂಪೇಗೌಡ ಮಹಾನ್ ವ್ಯಕ್ತಿಯೇನಲ್ಲ. ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಪ್ರಸಿದ್ಧ ಸ್ಥಳಗಳು, ಕೇಂದ್ರಗಳಿಗೆ ಕೆಂಪೇಗೌಡರ ಹೆಸರಿಡುವುದಕ್ಕೆ ನನ್ನ ಆಕ್ಷೇಪವಿದೆ. ಕೆಂಪೇಗೌಡ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ಕೆಂಪೇಗೌಡರನ್ನು ಮೀರಿಸುವ ರಾಜ-ಮಹಾರಾಜರು ಆಳಿ ಹೋಗಿದ್ದಾರೆ. ಮೈಸೂರು, ಬೆಂಗಳೂರು ಭಾಗದವರು ಕೇವಲ ತಮ್ಮ ಭಾಗ ಹಾಗೂ ತಾವೇ ಶ್ರೇಷ್ಠರು ಎನ್ನುತ್ತಿರುವುದು ಸರಿಯಲ್ಲ ಎಂದರು.
ಪ್ರಾದೇಶಿಕವಾಗಿ ನಾವು ಶ್ರೀಮಂತರಾಗಿದ್ದರೂ ಮೈಸೂರು ಭಾಗದವರು ಇಂದಿಗೂ ಆತನನ್ನು ವೈಭವೀಕರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮವರು ಎಚ್ಚೆತ್ತು ಈ ಭಾಗದ ದೊಡ್ಡ ರಾಜ ಪರಂಪರೆಗಳನ್ನು ಸ್ಮರಿಸಬೇಕು. ಈ ದಿಸೆಯಲ್ಲಿ ಈ ಭಾಗದವರು ಇನ್ನಾದರೂ ಎಚ್ಚರಗೊಳ್ಳಬೇಕು’ ಎಂದು ಹೇಳಿದರು.