ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು ತಮ್ಮ ದಾಂಪತ್ಯ ಜೀನನಕ್ಕೆ ಕೊನೆ ಹಾಡಿದ್ದಾರೆ.
ಚೆನ್ನೈನ ಕುಟುಂಬ ನ್ಯಾಯಾಲಯದಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಅಕ್ಟೋಬರ್ 31ರಂದು ವಿಚ್ಚೇದನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಾರಾಯಣ ಮೂರ್ತಿಯವರ ಪುತ್ರ ರೋಹನ್ ಮೂರ್ತಿ ಅಧ್ಯಯನ ಪೂರೈಸಿದ್ದು ಅಮೆರಿಕದ ಕಾರ್ನೆಲ್ ಮತ್ತು ಇಂಗ್ಲೆಂಡಿನ ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ. ಲಕ್ಷ್ಮಿ ಓದಿದ್ದು ಅಮೆರಿಕದ ಯಾಲೆ ವಿಶ್ವವಿದ್ಯಾಲಯದಲ್ಲಿ. ಇಬ್ಬರೂ ಪ್ರಚಿಷ್ಠಿತ ಮತ್ತು ವಿದ್ಯಾವಂತ ಕುಟುಂಬದಿಂದ ಬಂದವರು. ಇಬ್ಬರೂ ಭೇಟಿಯಾಗಿ ಪರಸ್ಪರ ಹತ್ತಿರವಾದರು. 2010 ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಮದುವೆ 2011 ಜೂನ್ ನಲ್ಲಿ ಚೆನ್ನೈಯಲ್ಲಿ ವೈಭವಯುತವಾಗಿ ನೆರವೇರಿತ್ತು. ನಂತರ ಬೆಂಗಳೂರಿನಲ್ಲಿ ರಿಸೆಪ್ಷನ್ ಕೂಡ ನಡೆಯಿತು.ಇವರಿಬ್ಬರ ವಿವಾಹ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.
ಈ ಜೋಡಿ ಎರಡು ವರ್ಷಗಳ ಹಿಂದೆಯೇ ದೂರವಾಗಿತ್ತು. ಕಾನೂನುಬದ್ಧವಾಗಿ ಈ ವರ್ಷ ಏಪ್ರಿಲ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಲಕ್ಷ್ಮಿ ಅವರ ಸಹೋದರ ಸುದರ್ಶನ್ ಮದುವೆಯಲ್ಲಿ ನಾರಾಯಣ ಮೂರ್ತಿಯವರ ಇಡೀ ಕುಟುಂಬ ಗೈರು ಹಾಜರಾಗಿದ್ದಾಗಲೇ ಈ ಎರಡು ಕುಟುಂಬಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದು ಸಂಶಯ ಮೂಡಿಸಿತ್ತು.
ಇವರಿಬ್ಬರಿಗೂ ಹತ್ತಿರವಾಗಿರುವವರು ಹೇಳುವ ಪ್ರಕಾರ, ರೋಹನ್ ಮತ್ತು ಲಕ್ಷ್ಮಿ ಇಬ್ಬರೂ ಒಳ್ಳೆಯವರೇ. ಕೆಲವೊಂದು ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದ ಜೀವನದಲ್ಲಿ ದೂರವಾಗುವ ನಿರ್ಧಾರಕ್ಕೆ ಬಂದರು. ಇದೀಗ ಕಾನೂನುಬದ್ಧವಾಗಿ ದೂರವಾಗಿರುವುದರಿಂದ ಇಬ್ಬರಿಗೂ ಮುಂದಿನ ದಿನಗಳಲ್ಲಿ ತಮ್ಮ ಇಷ್ಟದ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಅನುಕೂಲವಾಗಿದೆ.