ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಹ ಸ್ಪರ್ಧಿ ರವಿ ಮುರೂರು ಮೇಲೆ ಹಲ್ಲೆ ನಡೆಸಿ ವಿವಾದಕ್ಕೆ ಕಾರಣವಾಗಿದ್ದ ಹುಚ್ಚ ವೆಂಕಟ್ ಅವರ ಮುಖಕ್ಕೆ ದಲಿತ ಸಂಘಟನೆಯ ಕಾರ್ಯಕರ್ತರು ಮಸಿ ಬಳಿದ ಘಟನೆ ಬುಧವಾರ ನಡೆದಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ . ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಯ ಕಾರ್ಯಕರ್ತರು ಇಂದು ಈಟಿವಿ ಚಾನೆಲ್ ಕಚೇರಿಗೆ ಆಗಮಿಸುತ್ತಿದ್ದ ಹುಚ್ಚ ವೆಂಕಟ್ ಮುಖಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಅಂಬೇಡ್ಕರ್ ಮೇಲೆ ಗೌರವ ಇದೆ. ಯಾರೋ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಯಾರ ಮನಸ್ಸಿಗೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಖಾಸಗಿ ಚಾನೆಲ್ ನಲ್ಲಿ ಸಮಜಾಯಿಷಿ ನೀಡಿದ್ದಾರೆ.
ರವಿ ಮೂರೂರ್ ಮೇಲೆ ಹಲ್ಲೆ ನಡೆಸಿ ಬಿಗ್ ಬಾಸ್ ಶೋನಿಂದ ಹೊರಬಿದ್ದ ಬಳಿಕ ಸಾಹಿತಿ ಗಿರೀಶ್ ಕಾರ್ನಾಡ್ ಹಾಗೂ ನಟ ಕಿಚ್ಚ ಸುದೀಪ್ ವಿರುದ್ಧ ಅವಾಜ್ ಹಾಕಿದ್ದರು. ಇದೀಗ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.