ಶಿವಮೊಗ್ಗ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಕ್ಕೆ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ ಅವರು ಹತಾಶೆಗೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಬಿಜೆಪಿ ಹಿರಿಯ ನಾಯಕರ ಬಹಿರಂಗ ಟೀಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, ಆಡ್ವಾಣಿ ಸೇರಿದಂತೆ ಕೆಲ ಹಿರಿಯ ನಾಯಕರು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡ್ವಾಣಿ ಅವರು ಹತಾಶೆಗೊಂಡು ಮೋದಿ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಭೀಷ್ಮನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಎಸ್ವೈ, ದೊಡ್ಡವರು ತಮ್ಮ ಹಗುರ ಮಾತುಗಳನ್ನು ಬಿಡಬೇಕು. ಹಿರಿಯರ ಮಾತು ನಾಲ್ಕು ಗೋಡೆಗಳ ಮಧ್ಯ ಇರಬೇಕು. ಅದು ಬಿಟ್ಟು ಈ ರೀತಿ ಬಹಿರಂಗವಾಗಿ ಟೀಕಿಸುವುದರಿಂದ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತರುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಹಿರಿಯರ ಅಭಿಪ್ರಾಯ ತಿಳಿಸಬೇಕಿತ್ತು ಎಂದಿದ್ದಾರೆ.
ಅನೇಕ ಚುನಾವಣೆಗಳಲ್ಲಿ ಬಿಜೆಪಿ ಗೆದಿದ್ದೆ. ಆದರೆ ನನ್ನಿಂದ ಪಕ್ಷ ಗೆದ್ದಿದ್ದೆ ಎಂದು ಮೋದಿಯವರು ಎಲ್ಲೂ ಹೇಳಿಲ್ಲ. ಬಿಹಾರದಲ್ಲಿ ಬಿಜೆಪಿ ಸೋಲಿಗೆ ಕೇವಲ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾರಣರಲ್ಲ. ಅವರಿಬ್ಬರ ಮೇಲೆ ಹೊಣೆ ಹೊರಿಸಬಾರದು. ಸಾಮೂಹಿಕ ಪ್ರಯತ್ನದಿಂದ ಸೋಲು, ಗೆಲುವು ಸಾಧ್ಯ. ಹೀಗಾಗಿ ಸಾಮೂಹಿಕ ಹೊಣೆ ಹೊರುತ್ತೇವೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದರು.