ಬೆಂಗಳೂರು,ನ.11-ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಬಾಡಿಗೆಗೆ ಟ್ಯಾಕ್ಸಿ ಪಡೆದು ಅದನ್ನು ಕಳ್ಳತನ ಮಾಡಿದ್ದ ಐನಾತಿ ಆಸಾಮಿಯನ್ನು ಬನಶಂಕರಿ ಉಪವಿಭಾಗದ ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ನಿವಾಸಿ ದೀಪಕ್ ಕುಮಾರ್ ಅಲಿಯಾಸ್ ರಾಜ್ಕುಮಾರ್(32) ಬಂಧಿತ ಆರೋಪಿ.ಆರೋಪಿಯು ನವೆಂಬರ್ 3ರಂದು ಜಸ್ಟ್ ಡಯಲ್ಗೆ ಫೋನ್ ಮಾಡಿ ತಾನು ಇನ್ಕಮ್ ಟ್ಯಾಕ್ಸ್ ಇನ್ಸ್ಪೆಕ್ಟರ್. ದೇವನಹಳ್ಳಿ ಏರ್ಪೋರ್ಟ್ಗೆ ಹೋಗಲು ಬಾಡಿಗೆಗೆ ಒಂದು ಟ್ಯಾಕ್ಸಿ ಬೇಕಾಗಿದೆ. ಸಂಜೆ 5 ಗಂಟೆಗೆ ಪುಟ್ಟೇನಹಳ್ಳಿಯಲ್ಲಿರುವ ಬಿಗ್ಬಜಾರ್ ಬಳಿ ಕಾರನ್ನು ಕಳುಹಿಸಿಕೊಡಬೇಕೆಂದು ಕೋರಿದ್ದಾನೆ.
ಅದರಂತೆ ಐ-ಕ್ಯಾಬ್ ಕಂಪನಿ ಯಿಂದ ಟಯೋಟ ಇಟಿಯಾಸ್ ವಾಹನವನ್ನು ಜೆಪಿನಗರ ಪುಟ್ಟೇನಹಳ್ಳಿ ಬಿಗ್ ಬಜಾರ್ ಬಳಿ ಕಳುಹಿಸಿಕೊಟ್ಟಿದ್ದಾರೆ.ಆರೋಪಿಯು ವಾಹನ ಚಾಲಕ ನನ್ನು ಪರಿಚಯ ಮಾಡಿಕೊಂಡು ನಾನು ಮತ್ತು ನನ್ನ ಸ್ನೇಹಿತ ಹೈದರಾಬಾದ್ಗೆ ಹೋಗಬೇಕು. ಆತನನ್ನು ವುಡ್ಲ್ಯಾಂಡ್ ಹೋಟೆಲ್ ಬಳಿ ಪಿಕಪ್ ಮಾಡಬೇಕೆಂದು ಹೀಗೆ ಏನೇನೋ ಸಬೂಬು ಹೇಳಿ ಅಲ್ಲಿಯೇ ಸುತ್ತಾಡಿಸಿ ನಾವು ಹೈದರಾಬಾದ್ಗೆ ಹೋಗುವುದು ಕ್ಯಾನ್ಸಲ್ ಆಗಿದೆ ಎಂದು ತಿಳಿಸಿದ್ದಾನೆ. ನಂತರ ರಾತ್ರಿ 10.45ರ ವೇಳೆಗೆ ಹೊಸಕೆರೆ ಹಳ್ಳಿ ರಿಂಗ್ರಸ್ತೆ ಬಳಿ ಇರುವ ತಂಗಿ ಮನೆಗೆ ಹೋಗ ಬೇಕೆಂದು ಸುಳ್ಳು ಹೇಳಿ, ಸಮೀಪದಲ್ಲಿ ಕಾರು ನಿಲ್ಲಿಸುವಂತೆ ಸೂಚಿಸಿ ಆತನನ್ನು ಸಿಗರೇಟ್ ತರಲು ಕಳುಹಿಸಿದ್ದಾನೆ. ಚಾಲಕ ಸಿಗರೇಟ್ ತರುವಷ್ಟರಲ್ಲಿ ಆರೋಪಿಯು ಚಾಲಕನನ್ನು ಯಾಮಾರಿಸಿ ಕಾರನ್ನು ಕದ್ದೊಯ್ದಿದ್ದಾನೆ. ಕಾರಿನ ಮಾಲೀಕ ಪುಟ್ಟಸ್ವಾಮಿ ನೀಡಿದ ದೂರಿನ ಮೇರೆಗೆ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಕೆ.ಸುಬ್ರಮಣಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಬಿ.ಎಸ್.ಲೋಕೇಶ್ ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಬನಶಂಕರಿ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಆರ್.ಸಿ.ಲೋಕೇಶ್ ಕುಮಾರ್ ನೇತೃತ್ವದಲ್ಲಿ ಗಿರಿನಗರ ಠಾಣೆಯ ಇನ್ಸ್ಪೆಕ್ಟರ್ ಎಚ್.ಜೆ.ಶಿವಶಂಕರ್ , ಸಬ್ಇನ್ಸ್ಪೆಕ್ಟರ್ ಕೆ.ಸುಬ್ರಮಣಿ ಮತ್ತು ಸಿಬ್ಬಂದಿ ತಂಡ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವ ಮಾಡಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.