ಬೆಂಗಳೂರು, ನ.4- ಕಾವೇರಿ ನದಿ ಕಲುಷಿತ ವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನೈರ್ಮಲ್ಯಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜ್ಞಾನ ಆಯೋಗದ ಅಧ್ಯಕ್ಷ ಹಾಗೂ ವಿಜ್ಞಾನಿ ಕಸ್ತೂರಿ ರಂಗನ್ ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜ್ಞಾನ ಆಯೋಗದ ಪ್ರಗತಿ ವರದಿ ಸಲ್ಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ನದಿ ನೈರ್ಮಲ್ಯಗೊಳಿಸಲು ಶೀಘ್ರವೇ ಯೋಜನೆ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಈಗಾಗಲೇ ಬೆಂಗಳೂರಿನ ಮಡಿವಾಳ ಕೆರೆಯನ್ನು ಜೈವಿಕ ತಂತ್ರಜ್ಞಾನ ಬಳಸಿ ಜೀವ ವೈವಿಧ್ಯ ಪಾರ್ಕ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನೆರಡು ಮೂರು ವರ್ಷಗಳಲ್ಲಿ ಮಡಿವಾಳ ಕೆರೆ ನೈಸರ್ಗಿಕವಾಗಿ ಅಭಿವೃದ್ಧಿಯಾಗಲಿದೆ. ಇದಕ್ಕಾಗಿ 22 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಮತ್ತು ಕ್ರೀಡಾನೀತಿ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಎಲ್ಲ ಸಿದ್ಧತೆ ನಡೆಸಲಾಗಿದೆ. ವೈಜ್ಞಾನಿಕ ಮತ್ತು ತಂತ್ರಜ್ಞಾನ ಬಳಕೆ ಸೇರಿದಂತೆ ಉತ್ತಮ ನೀತಿಯನ್ನು ರೂಪಿಸಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಪಠ್ಯಕ್ರಮ ಮಾಡಲಾಗುತ್ತದೆ ಎಂದು ಹೇಳಿದರು. ಉನ್ನತ ಶಿಕ್ಷಣ ಹೇಗಿರಬೇಕು, ಯಾವ ಅಂಶಗಳಿರಬೇಕು ಎಂಬ ಬಗ್ಗೆಯೂ ತಿಳಿಸಲಾಗುತ್ತದೆ ಎಂದು ಹೇಳಿದ ಕಸ್ತೂರಿ ರಂಗನ್ ಅವರು, ಡಿಜಿಟಲ್ ಇಂಡಿಯಾಗೆ ಪೂರಕವಾಗಿ ರಾಜ್ಯ ಸರ್ಕಾರದಲ್ಲೂ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಉಪಗ್ರಹ ಆಧಾರಿತ ಶಿಕ್ಷಣ ದೊರಕುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಬಯಸುವುದಿಲ್ಲ. ದೇಶದಲ್ಲಿ ಕೋಟಿ ಕೋಟಿ ಜನರಿದ್ದಾರೆ. ಅನೇಕರು ಅನೇಕ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಸಾಗರಕ್ಕೆ ಒಂದು ಹನಿ ಸೇರಿದರೆ ಏನೂ ವ್ಯತ್ಯಾಸವಾಗಿಬಿಡುವುದಿಲ್ಲ. ಹಾಗಾಗಿ ನನ್ನ ಅಭಿಪ್ರಾಯದಿಂದ ಯಾವುದೇ ವ್ಯತ್ಯಾಸ ಆಗಲಾರದು ಎಂದು ತಿಳಿಸಿದರು. ಕೇಂದ್ರ ಸಚಿವ ಅನಂತ್ಕುಮಾರ್ ಅವರು ರಾಗಿಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಮಾರ್ಗಸೂಚಿ ರಚಿಸಲಾಗುತ್ತಿದೆ ಎಂದು ಹೇಳಿದರು.