ಹಾಸನ: ಪರೀಕ್ಷೆಗೆ ಕೂರಿಸಲು ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ನಗರದ ಎಚ್ಡಿಡಿ ಕೋ ಆಪರೇಟಿವ್ ಸೊಸೈಟಿ ಒಡೆತನದ ನರ್ಸಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಹೆಲ್ತ್ ಇನ್ಸ್ ಪೆಕ್ಟರ್ ಪದವಿ ಓದುತ್ತಿದ್ದ ಬೆಂಗಳೂರು ಜೆಪಿ ನಗರದ ಮೂಲದ ಭವ್ಯಶ್ರೀ(20) ಮೃತಪಟ್ಟ ವಿದ್ಯಾರ್ಥಿನಿ. ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಭವ್ಯಶ್ರೀಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಮಧ್ಯರಾತ್ರಿ 1 ಗಂಟೆಯ ವೇಳೆ ಪೋಷಕರು ಜೆಪಿ ನಗರದಲ್ಲಿರುವ ರಾಜೇಂದ್ರ ಆಸ್ಪತ್ರೆಗೆ ಭವ್ಯಶ್ರೀಯನ್ನು ದಾಖಲಿಸಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಮುಂದಿನ ತಿಂಗಳು ನಡೆಯಬೇಕಿದ್ದ ಪರೀಕ್ಷೆಗೆ ಫೀಸು ಕಟ್ಟಲು ನಿನ್ನೆ ಕೊನೆಯ ದಿನವಾಗಿತ್ತು. 1 ಸಾವಿರ ರೂ. ಪರೀಕ್ಷೆ ಶುಲ್ಕ ಕಟ್ಟಲು ಹೋದಾಗ ಹಿಂದಿನ ಬಾಕಿ 1 ಸಾವಿರ ರೂ. ಕಾಲೇಜು ಶುಲ್ಕದ ಜೊತೆಗೆ 6 ಸಾವಿರ ರೂ. ದಂಡ ಕಟ್ಟುವಂತೆ ಕಾಲೇಜಿನ ಸಿಬ್ಬಂದಿ ತಾಕೀತು ಮಾಡಿದ್ದರು. ಇಷ್ಟೊಂದು ಶುಲ್ಕವನ್ನು ಕಟ್ಟಲು ಈಗ ನನ್ನ ಬಳಿ ಹಣ ಇಲ್ಲ ಎಂದು ಭವ್ಯಶ್ರೀ ಹೇಳಿದ್ದಕ್ಕೆ ಎಕ್ಸಾಂ ಫಾರ್ಮ್ ಕೊಡಲು ಕಾಲೇಜಿನವರು ನಿರಾಕರಿಸಿದ್ದಾರೆ. ಕಾಲೇಜಿನ ಸಹಪಾಠಿಗಳ ಜೊತೆ ಭವ್ಯಶ್ರೀ ಮಧ್ಯಾಹ್ನ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ನಂತರ ಹಾಸ್ಟೇಲ್ಗೆ ಆಗಮಿಸಿ ಕ್ರಿಮಿನಾಶಕ ಸೇರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.