ಬೆಳಗಾವಿ: ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಸಂಚು ಅಂತೂ ಬಯಲಾದಂತಾಗಿದೆ. ರಾಷ್ಟ್ರೀಯ ತನಿಖಾ ದಳ ವಾಂಟೆಡ್ ಲಿಸ್ಟ್ ನಲ್ಲಿರುವ ರುದ್ರ ಪಾಟೀಲನೇ ಕಲಬುರ್ಗಿಯವರ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದು ರಾಜ್ಯದ ಸಿಐಡಿ, ಗೋವಾದ ಎನ್ಐಎ ಹಾಗೂ ಕೊಲ್ಲಾಪುರದ ಎಸ್ಐಟಿ ತನಿಖೆಯಿಂದ ಬಹುತೇಕ ಖಚಿತವಾಗಿದೆ.
ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ರುದ್ರ ಪಾಟೀಲನೇ ಸಂಚು ರೂಪಿಸಿದ್ದನೆಂಬುದನ್ನು ಸಾಬೀತುಪಡಿಸುವ ಮಹತ್ವದ ಸಾಕ್ಷ್ಯ ಲಭ್ಯವಾಗಿರುವ ಸಾಕ್ಷಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಸನಾತನ ಸಂಸ್ಥೆಯ ಕಾರ್ಯಕರ್ತನಾಗಿರುವ ರುದ್ರ ಪಾಟೀಲ ಗೋವಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ವಿಚಾರವಾದಿಗಳಾದ ಪುಣೆಯ ನರೇಂದ್ರ ದಾಭೋಲ್ಕರ್ ಹಾಗೂ ಕೊಲ್ಲಾಪುರದ ಗೋವಿಂದರಾವ್ ಪನ್ಸಾರೆ ಹತ್ಯೆಯ ಮಾಸ್ಟರ್ ಮೈಂಡ್ ಈತನೇ ಎಂದು ಹೇಳಲಾಗುತ್ತಿದೆ. ಸದ್ಯ ಈಗ ರುದ್ರ ಪಾಟೀಲ ಭೂಗತನಾಗಿದ್ದು, ಸನಾತನ ಸಂಸ್ಥೆ ಈತ ತನ್ನ ಸಂಪರ್ಕದಲ್ಲಿಲ್ಲ ಎಂದು ಘೊಷಿಸಿಕೊಂಡಿದೆ.
ರುದ್ರ ಪಾಟೀಲ ಯಾರು?
ಬೆಳಗಾವಿ ಜಿಲ್ಲೆಯ ಸಂಕೇಶ್ವರದವನಾದ ರುದ್ರ ಪಾಟೀಲ ಸುಮಾರು 25 ವರ್ಷಗಳ ಹಿಂದೆ ಅವನ ಇಡೀ ಕುಟುಂಬ ಸಾಂಗ್ಲಿಗೆ ತೆರಳಿ, ಅಲ್ಲಿಯೇ ವಾಸವಾಗಿತ್ತು. ಅಪಾರ ಧಾರ್ವಿಕ ನಂಬುಗೆಯ ರುದ್ರ ಪಾಟೀಲ, ಕೆಲ ಕಾಲ ಸ್ಥಳೀಯ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದ. ಬಳಿಕ ಸನಾತನ ಸಂಸ್ಥಾನದ ಸಕ್ರಿಯ ಕಾರ್ಯಕರ್ತನಾಗಿ ಸಾಂಗ್ಲಿಯಲ್ಲಿ ಪರಿಚಿತನಾದ. ರುದ್ರ ಪಾಟೀಲನ ಪತ್ನಿ ಪ್ರೀತಿ ಪಾಟೀಲ ಸದ್ಯ ಸಾಂಗ್ಲಿಯಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾರೆ. 2009ರಲ್ಲಿ ಗೋವಾದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.