ಬೆಂಗಳೂರು, ಆ.31: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರ ಅಶ್ವಿನ್ ರಾವ್ ಬಂಧನದ ನಂತರ ದೀರ್ಘ ರಜೆಯ ಮೇಲೆ ತೆರಳಿರುವ ನ್ಯಾ.ವೈ.ಭಾಸ್ಕರ್ ರಾವ್ ಮತ್ತೊಂದು ತಿಂಗಳ ಅವಧಿಗೆ ತಮ್ಮ ರಜೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಜು.27ರಂದು ಅಶ್ವಿನ್ರಾವ್ ಅವರ ಬಂಧನದ ನಂತರ ಆ.14ರವರೆಗೆ ರಜೆ ಹಾಕಿದ್ದ, ಭಾಸ್ಕರ್ರಾವ್ ನಂತರದಲ್ಲಿ ತಮ್ಮ ರಜೆಯನ್ನು ಆ.31ರ ವರೆಗೆ ವಿಸ್ತರಿಸಿದ್ದರು. ಅಶ್ವಿನ್ರಾವ್ಗೆ ಜಾಮೀನು ದೊರೆಯದಿರುವ ಹಿನ್ನೆಲೆಯಲ್ಲಿ ಅವರು ರಜೆಯನ್ನು 31ರಿಂದ ಸೆ.30ರ ವರೆಗೆ ವಿಸ್ತರಿಸಿದ್ದು, ರಜೆಗೆ ಯಾವುದೇ ಕಾರಣವನ್ನು ನಮೂದಿಸಿಲ್ಲ.
ಲೋಕಾಯುಕ್ತ ಸಂಸ್ಥೆಯ ಉಸ್ತುವಾರಿ ರಿಜಿಸ್ಟ್ರಾರ್ ಎಂ.ಎಸ್.ಬಾಲಕೃಷ್ಣ ಅವರಿಗೆ ರಜೆಯ ಪತ್ರವನ್ನು ರವಿವಾರ ಕಳುಹಿಸಿದ್ದಾರೆ. ಅರ್ಜಿ ವಿಚಾರಣೆ: ಕೇಸ್ ನಂ.58ರಲ್ಲಿ ವಿ.ಭಾಸ್ಕರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಸರಕಾರಿ ಅಭಿಯೋಜಕರು ಇಂದು ಅಕ್ಷೇಪಣೆ ಸಲ್ಲಿಸಲಿದ್ದಾರೆ.