ಬೆಳಗಾವಿ: ಮ್ಯಾಗಿ ಪ್ಯಾಕೆಟ್ಗಳಲ್ಲಷ್ಟೇ ರಾಸಾಯನಿಕವಿದೆ ಎಂದು ಭಾವಿಸಿದವರಿಗೆ ಇದೋ ಇಲ್ಲಿದೆ ಆಘಾತಕಾರಿ ಮಾಹಿತಿ, ರಾಜ್ಯದ ಉದ್ದಗಲಕ್ಕೂ ಮಾರಾಟವಾಗುವ ನಿತ್ಯ ಬಳಕೆಯ ಆಹಾರ ಧಾನ್ಯಗಳೂ ಕಲಬೆರಕೆಗೊಂಡಿವೆ.
ರಾಗಿಹಿಟ್ಟು, ಹೆಸರುಬೇಳೆ, ಮೈಸೂರುಪಾಕ್, ಚಿಕ್ಕಿ, ಅಡುಗೆ ಎಣ್ಣೆ, ಅರಿಶಿನ, ಚಹಾ-ಕಾಫಿಪುಡಿ, ಪ್ಯಾಕ್ ಮಾಡಲಾದ ಕುಡಿಯುವ ನೀರು ಹೀಗೆ ಗ್ರಾಹಕರು ಬಳಸುವ ಬಹುಪಾಲು ಆಹಾರವಸ್ತುಗಳು ಕಲಬೆರಕೆಯಾಗಿವೆ, ಈ ಆಘಾತಕಾರಿ ಮಾಹಿತಿಯನ್ನು ರಾಜ್ಯ ಸರಕಾರವೇ ನೀಡಿದೆ. ವಿಧಾನಸಭೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಅವರು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನೀಡಿದ ಉತ್ತರವು ಈ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.
ಬೆಂಗಳೂರು, ಕಲಬುರಗಿ, ಮೈಸೂರಿನಲ್ಲಿರುವ ರಾಜ್ಯ ಆಹಾರ ಪ್ರಯೋಗಾಲಯಗಳಲ್ಲಿ ಈ ಆಹಾರ, ಧಾನ್ಯಗಳನ್ನು ಪರೀಕ್ಷಿಸಿದಾಗ ಅಸುರಕ್ಷಿತ, ಕಳಪೆ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಪೂರೈಸುತ್ತಿರುವುದು ಪತ್ತೆಯಾಗಿದೆ.
ಯಾವ್ಯಾವುದು ಕಲಬೆರಕೆ… ಕೋಲಾರ, ತುಮಕೂರು, ದಾವಣಗೆರೆ, ಬಳ್ಳಾರಿ, ಹಾಸನ, ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗಿರುವ ಕಾಫಿಪುಡಿ, ಅರಿಶಿನ ಪುಡಿ, ರಿಫೈನ್ಡ್ ಎಣ್ಣೆ , ಖಾರದ ಪುಡಿ, ಪ್ಯಾಕ್ ಮಾಡಲಾದ ಕುಡಿಯುವ ನೀರು, ತೆಂಗಿನ ಎಣ್ಣೆ, ಟೊಮ್ಯಾಟೊ ಸಾಸ್, ಖೋವ, ಹಾಲು, ಟೋನ್ಡ್ಹಾಲು, ಒಣಗಿಸಿದ ಮೆಂತ್ಯೆಸೊಪ್ಪು, ಅಯೋಡೈಸ್ಡ್ ಉಪ್ಪು, ಜೇನುತುಪ್ಪ, ಲೆಮೆನ್ ರೈಸ್ ಪೌಡರ್, ಬಾದಾಮಿ ಡ್ರಿಂಕ್ಸ್, ರೀಫೈನ್ಡ್ ರೈಸ್ಬ್ರಾನ್ ಆಯಿಲ್, ಬಾಳೆಕಾಯಿ ಚಿಪ್ಸ್, ಕೋಕೋನಟ್ ಪೌಡರ್ಗಳನ್ನು ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅವು ಬಳಕೆಗೆ ಯೋಗ್ಯವಲ್ಲದಿರುವುದು, ಆರೋಗ್ಯಕ್ಕೆ ಹಾನಿಕರವಾಗಿರುವುದು ಪತ್ತೆಯಾಗಿದೆ. ಕೆಲವೊಂದು ವಸ್ತುಗಳ 8, ಕೆಲವು ವಸ್ತುಗಳ 30-70 ಹಾಗೂ ಕೆಲವು ಎಣ್ಣೆಗಳ 130ಕ್ಕೂ ಹೆಚ್ಚು ಸ್ಯಾಂಪಲ್ಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ.
ಉಡುಪಿ, ಚಾಮರಾಜನಗರ, ದ.ಕ., ಮೈಸೂರು, ಮಂಡ್ಯ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಂಗ್ರಹಿಸಿ ಮೈಸೂರು ಹಾಗೂ ಬೆಳಗಾವಿಯ ಮುಖ್ಯ ಆಹಾರ ವಿಶ್ಲೇಷಕರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾದ ವಸ್ತುಗಳ ಪೈಕಿ ಗೋಧಿ ಹಿಟ್ಟು, ಧನಿಯಾ ಪುಡಿ, ಕಲ್ಲುಸಕ್ಕರೆ, ಹತ್ತಿ ಬೀಜದ ಎಣ್ಣೆ, ರವೆ, ಪಾಯಸದ ಮಿಶ್ರಣ, ಉಪ್ಪಿನ ನೀರು, ಹೆಸರು-ತೊಗರಿ ಬೇಳೆ, ಟೊಮ್ಯಾಟೊ ಸಾಸ್, ಎಮ್ಮೆ ಹಾಲು, ತುಪ್ಪ, ಮಸಾಲ ಪೌಡರ್, ಶ್ರೀಖಂಡ, ಗುಟ್ಕಾ, ಚಿಲ್ಲಿಸಾಸ್, ಜಿಲೇಬಿ, ಪಾನ್ಮಸಾಲ, ಪಾಮ್ ಆಯಿಲ್, ಶೇಂಗಾ ಎಣ್ಣೆ, ಮಿಕ್ಸ್ಚರ್, ಖಾರದ ಬೂಂದಿಗಳು ತಿನ್ನಲು ಸುರಕ್ಷಿತವಲ್ಲವೆಂದು ವರದಿ ಹೇಳಿದೆ. ಇಲ್ಲಿ 10ರಿಂದ 95 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಕೊಪ್ಪಳ, ಬಳ್ಳಾರಿ, ಬೀದರ್, ರಾಯಚೂರು, ಕಲಬುರಗಿ ಜಿಲ್ಲೆಗಳಿಂದ ಸಂಗ್ರಹಿಸಲಾದ ಆಹಾರ ವಸ್ತುಗಳ ಸ್ಯಾಂಪಲ್ಗಳನ್ನು ಕಲಬುರಗಿಯ ವಿಭಾಗೀಯ ಆಹಾರ ಪ್ರಯೋಗಾಲದಲ್ಲಿ ಪರೀಕ್ಷೆ ಮಾಡಲಾಗಿದೆ. ಐಸ್ಕ್ರೀಂ, ಮೊಸರು, ಮಜ್ಜಿಗೆ, ತೊಗರಿ ಬೇಳೆ, ಗೋಧಿ ಹಿಟ್ಟು, ಗರಂ ಮಸಾಲ, ಜೋಳ, ಟೀಪುಡಿ, ಬ್ರೆಡ್, ಗುಟ್ಕಾ, ಸೂರ್ಯಕಾಂತಿ ಎಣ್ಣೆ, ಜಾಮೂನು ಪ್ಯಾಕ್, ವಿನೇಗರ್ಗಳು ಹಾನಿಕರವಾಗಿದ್ದುದು ಪತ್ತೆಯಾಗಿದೆ.
ಜೋಕೆ ತಿಂದರೆ ಅಪಾಯ ರಾಗಿ ಹಿಟ್ಟು ಹೆಸರು ಬೇಳೆ ಚಹಾ ಪುಡಿ ಕಾಫಿ ಪುಡಿ ಗೋಧಿ ಹಿಟ್ಟು ಧನಿಯಾ ಪುಡಿ ಜೇನುತುಪ್ಪ ಜಾಮೂನ್ ಪ್ಯಕ್ ಬಾದಾಮಿ ಡ್ರಿಂಕ್ಸ್ ಮೊಸರು ಮಜ್ಜಿಗೆ ಐಸ್ ಕ್ರೀಂ ತುಪ್ಪ