ಬೆಂಗಳೂರು, ಜು.7- ನಿನ್ನೆ ಎಲ್ಲರಿಗೂ ಕೈ ಮುಗಿದು ಕಚೇರಿಯಿಂದ ಹೊರ ನಡೆದಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ರಾವ್ ಅವರು ದೀರ್ಘಕಾಲದ ರಜೆ ಮೇಲೆ ತೆರಳಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದೆಲ್ಲವನ್ನು ಹುಸಿ ಮಾಡಿರುವ ಲೋಕಾಯುಕ್ತರು ಇಂದು ಮತ್ತೆ ಕಚೇರಿಗೆ ಆಗಮಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.
ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆಗಮಿಸಿದ ಭಾಸ್ಕರ್ರಾವ್ ಅವರು ತಮ್ಮದೆ ಆದ ಶೈಲಿಯಲ್ಲಿ ಎಲ್ಲರಿಗೂ ವಿಷ್ ಮಾಡಿ ತಮ್ಮ ಕಚೇರಿ ಸೇರಿಕೊಂಡರು. ಮಧ್ಯಾಹ್ನದವರೆಗೂ ಹೊರಗೆ ಬಂದಿರಲಿಲ್ಲ. ಒಳಗೇನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಅವರು ಕಚೇರಿಗೆ ಆಗಮಿಸಿದ ಕೂಡಲೇ ಉಪಲೋಕಾಯುಕ್ತ ಮಜ್ಜಗೆ, ಸುಭಾಷ್ ಬಿ.ಆಡಿ, ಎಸ್ಪಿ ಸೋನಿಯಾ ನಾರಂಗ್ ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮ ಕಚೇರಿ ಸೇರಿಕೊಂಡರು.
ನಿನ್ನೆ ಕೆಲವು ದಾಖಲೆ ಪತ್ರಗಳೊಂದಿಗೆ ಹೊರ ನಡೆದಿದ್ದ ಭಾಸ್ಕರ್ರಾವ್ ಅವರು ಸೀದಾ ಹೋಗಿದ್ದು ರಾಜಭವನಕ್ಕೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದರು. ರಾಜ್ಯಪಾಲರು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಹಾಗಾಗಿ ಬೆಳಗ್ಗೆ 10 ಗಂಟೆಗೆ ಬಂದು ಕರ್ತವ್ಯದಲ್ಲಿ ತೊಡಗಿಕೊಂಡರು. ಇದನ್ನು ನೋಡಿದರೆ ಸಂಜೆವರೆಗೂ ಕೆಲಸ ಮುಗಿಸಿ ನಂತರ ದೀರ್ಘಕಾಲದ ರಜೆ ಮೇಲೆ ತೆರಳಿದ್ದಾರೆ ಎಂಬುದು ಎಲ್ಲರ ಭಾವನೆಯಾಗಿದೆ. ದೀರ್ಘಕಾಲದ ರಜೆ ಮೇಲೆ ತೆರಳಬೇಕಾದರೆ ಏನೇನು ಕ್ರಮ ತೆಗೆದುಕೊಳ್ಳಬೇಕು, ಅಧಿಕಾರಿಗಳಿಗೆ ಏನೇನು ಸಲಹೆ ನೀಡಬೇಕು ಎಂಬುದರ ಬಗ್ಗೆ ಸಿದ್ಧತೆಯಲ್ಲಿ ತೊಡಗಿದ್ದಾರಾ ಎಮಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.