ಬೆಂಗಳೂರು: ತಾಯಿಗೆ ಹೃದಯಾಘಾತವಾದ ಸುದ್ದಿಯನ್ನು ಕೇಳಿ ಆಘಾತಕ್ಕೀಡಾದ ಪುತ್ರನೊಬ್ಬ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಐಟಿಸಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿರುವ ಸುಬ್ರಹ್ಮಣ್ಯನಗರದ ನಿವಾಸಿ ರಾಮಕೃಷ್ಣಮೂರ್ತಿ (40) ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ದುರ್ದೈವಿಯಾಗಿದ್ದಾರೆ.
ಗುರುವಾರ ರಾತ್ರಿ ರಾಮಕೃಷ್ಣಮೂರ್ತಿ ಅವರ ತಾಯಿ ಗಂಗಮ್ಮ ಅವರಿಗೆ ಹೃದಯಾಘಾತವಾಗಿದ್ದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು. ಎಷ್ಟೇ ಖರ್ಚಾದರೂ ತಾಯಿಗೆ ಆಪರೇಶನ್ ಮಾಡಿಸೋಣ ಎಂದು ಸಹೋದರರ ಬಳಿ ಹೇಳಿಕೊಂಡಿದ್ದ ಮಗ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರ ಸಹೋದರ ಶಾಂತಕುಮಾರ್ ಆಸ್ಪತ್ರೆಗೆಯಿಂದ ಮನೆಗೆ ವಾಪಸ್ಸಾದಾಗ ಅಣ್ಣ ನೇಣು ಬಿಗಿದುಕೊಂಡಿರುವುದು ತಿಳಿದು ಬಂದಿದೆ.
ತಾಯಿಯನ್ನು ತುಂಬ ಪ್ರೀತಿಸುತ್ತಿದ್ದ ರಾಮಕೃಷ್ಣ ಆಕೆಗೆ ಹೃದಯಾಘಾತವಾಗಿದ್ದರಿಂದ ಆಘಾತಗೊಂಡಿದ್ದ ಎಂದು ಸಹೋದರ ತಿಳಿಸಿದ್ದಾನೆ.
ಆಸ್ಪತ್ರೆಗೆ ದಾಖಲಾಗಿದ್ದ ಮೃತನ ತಾಯಿ ಗಂಗಮ್ಮ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.