ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ಸುಳ್ಳಲ್ಲ. ಇದಕ್ಕೆ ನಿದರ್ಶನವೆಂಬಂತೆ ಅತ್ತೆಯೊಬ್ಬಳು ಸೊಸೆಯ ಮರ್ಮಾಂಗ ಮತ್ತು ಪೃಷ್ಠ ಭಾಗಕ್ಕೆ ಬರೆ ಎಳೆದು ತನ್ನ ರಾಕ್ಷಸಿತನವನ್ನು ಪ್ರದರ್ಶಿಸಿದ ಹೇಯ ಘಟನೆ ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಸಾದರಹಳ್ಳಿ ಎಂಬ ಊರಿನಲ್ಲಿ ಈ ಘಟನೆ ನಡೆದಿದ್ದು ನಾಗರಾಜ್ ಎಂಬಾತ ಈ ಹಿಂದೆ ಮದುವೆಯಾಗಿ ಆಕೆಗೆ ವಿಚ್ಚೇದನ ನೀಡಿದ್ದ. ತದ ನಂತರ ನೆಲಮಂಗಲ ಮೂಲದ ಮಂಗಳಗೌರಿ ಎಂಬಾಕೆಯನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದ.
ಮಂಗಳಗೌರಿಯನ್ನು ಮದುವೆಯಾದ ನಂತರ ಪತಿ ನಾಗರಾಜ್ , ಅತ್ತೆ ಹನುಮವ್ವ ಹಾಗೂ ವಾರಗಿತ್ತಿ ತಿಮ್ಮವ್ವ ಸೇರಿಕೊಂಡು ನಿರಂತರವಾಗಿ ಹಲ್ಲೆ ಮಾಡುವುದು ಮತ್ತು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು ಈ ನಡುವೆ ತಿಮ್ಮವ್ವ ಹಾಗೂ ನಾಗರಾಜ್ ನಡುವೆ ಅನೈತಿಕ ಸಂಬಂಧ ಇತ್ತು ಎಂಬುದನ್ನು ಅರಿತು ಮಂಗಳಗೌರಿ ಆಕ್ಷೇಪಿಸಿದ್ದಾಳೆ. ಇದರಿಂದ ಅಕ್ರೋಶಗೊಂಡ ಹನುಮವ್ವ ಹಾಗೂ ತಿಮ್ಮವ್ವ ಸೇರಿಕೊಂಡು ಮನಬಂದಂತೆ ಥಳಿಸಿ ,ಮರ್ಮಾಂಗ ಹಾಗೂ ಪ್ರಷ್ಠ ಭಾಗಕ್ಕೆ ಸಲಾಕೆ ಕಾಯಿಸಿ ಬರೆ ಎಳೆದಿದ್ದಾರೆ.
ಈ ಘಟನೆಯಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಗಾಯಗೊಂಡಿರುವ ಮಂಗಳಗೌರಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುಮಕೂರು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಈ ದೂರು ಸಲ್ಲಿಸಲಾಗಿದ್ದು, ಅವರ ಆದೇಶದ ಮೇರಗೆ ಮಧುಗಿರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.