ಬೆಂಗಳೂರು,ಜೂ.10- ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 49ನೇ ಹುಟ್ಟುಹಬ್ಬದ ಅಂಗವಾಗಿ ಕುವೆಂಪು ಮಂತ್ರಮಾಂಗಲ್ಯ ಪದ್ಧತಿಯಡಿ ಸಾಮೂಹಿಕ ವಿವಾಹ ಸೇರಿದಂತೆ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಗರದಾದ್ಯಂತ ಆಯೋಜಿಸಲಾಗಿತ್ತು.
ನಗರದ ಗಾಯತ್ರಿ ವಿಹಾರ, ಅರಮನೆ ಮೈದಾನದಲ್ಲಿ 32 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹವನ್ನು ಸ್ವತಃ ನಾರಾಯಣಗೌಡರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಇದಲ್ಲದೆ ವಿವಿಧೆಡೆ ರಕ್ತದಾನ ಶಿಬಿರ, ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ಔಷಧಿ ವಿತರಣೆ, ವಯೋವೃದ್ಧ ಕೈದಿಗಳ ಬಿಡುಗಡೆಗೆ ಆರ್ಥಿಕ ನೆರವು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಂತ್ರಮಾಂಗಲ್ಯ ಪದ್ದತಿಯ ಸರಳ ವಿವಾಹದ ವೇಳೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಕ್ರೇಜಿಸ್ಟಾರ್ ರವಿಚಂದ್ರನ್, ಸಚಿವರಾದ ಕೃಷ್ಣಭೈರೇಗೌಡ, ಉಮಾಶ್ರೀ, ಡಿ.ಕೆ.ಶಿವಕುಮಾರ್, ಕಸಾಪ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ನಟ ಪ್ರೇಮ್, ಕಡಿದಾಳ್ಶಾಮಣ್ಣ ಸೇರಿದಂತೆ ಮತ್ತಿತರರು ಪಾಲ್ಗೊಂಡು ನವ ವಧುವರರಿಗೆ ಆರ್ಶೀವದಿಸಿದರು.