ಬೀದರ್: ರಾಜ್ಯಾದ್ಯಂತ ಮೇ 29 ಮತ್ತು ಜೂನ್ 2ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನಿನ್ನೆ ಹೊರ ಬಿದ್ದಿದ್ದು, ಸೋಲನ್ನು ಕಂಡ ಅಭ್ಯರ್ಥಿಯೋರ್ವ ತನ್ನ ಬಯಕೆಯನ್ನು ದೇವರು ಈಡೇರಿಸಲಿಲ್ಲ ಎಂಬ ಕಾರಣದಿಂದ ದೇವಸ್ಥಾನದಲ್ಲಿನ ದೇವರ ಮೂರ್ತಿಯನ್ನೇ ಭಗ್ನಗೊಳಿಸಿರುವ ಘಟನೆ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಘುನಾಥ ಚಂದ್ರಪ್ಪ(35) ಎಂಬಾತನೇ ದೇವರ ಮೂರ್ತಿಯನ್ನು ಭಗ್ನಗೊಳಿಸಿದ ವ್ಯಕ್ತಿಯಾಗಿದ್ದು, ಈತ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡ ಈತ, ಗ್ರಾಮದಲ್ಲಿನ ಮಹಾಲಿಂಗರಾಯ ದೇವಸ್ಥಾನಕ್ಕೆ ನುಗ್ಗಿ ಒಳಗಿದ್ದ ದೇವರ ಮೂರ್ತಿಯನ್ನು ಭಗ್ನಗೊಳಿಸಿದ್ದಾನೆ.
ಇನ್ನು ತುಂಬಾ ಆವೇಷಭರಿತನಾಗಿದ್ದರಿಂದ ಈ ವೇಳೆ ಅಲ್ಲಿನ ಇತರೆ ಪೂಜಾ ಸಾಮಾನುಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದು, ದೇವಸ್ಥಾನದ ಅರ್ಚಕರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಈ ಸಂಬಂಧ ದೇವಸ್ಥಾನದ ಅರ್ಚಕರು ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಗೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.