ಬೆಂಗಳೂರು, ಜೂ.3: ಮ್ಯಾಗಿಯಲ್ಲಿ ವಿಷಕಾರಿ ಅಂಶ ಒಳಗೊಂಡಿರುವ ಬಗ್ಗೆ ಕೇಂದ್ರವು ಸಹ ತನಿಖೆ ನಡೆಸುತ್ತಿದ್ದು, ತನಿಖೆಯ ವರದಿ ಬಂದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಆಹಾರ ಪದಾರ್ಥವಾಗಿರುವ ಮ್ಯಾಗಿಯಲ್ಲಿ ರಾಸಾಯನಿಕ ಅಂಶ ಬೆರೆತು ವಿಷಕಾರಿಯಾಗಿದೆ ಎನ್ನಲಾಗುತ್ತಿದೆ. ಇದರ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸಲಾಗುತ್ತಿದೆ ಎಂದರು. ಇಂತಹ ಉತ್ಪನ್ನಗಳ ಜಾಹೀರಾತಿನಲ್ಲಿ ಪ್ರಸಿದ್ಧ ನಟ-ನಟಿಯರು ಪಾಲ್ಗೊಳ್ಳುವಾಗ ಅದರ ಬಗ್ಗೆ ತಿಳಿದುಕೊಳ್ಳಬೇಕು. ಅರಿವಿಲ್ಲದೆ ಪ್ರಚಾರ ನಡೆಸಿದರೆ ತಪ್ಪಲ್ಲ. ಆದರೆ, ಅರಿವಿದ್ದರೂ ಪ್ರಚಾರ ನಡೆಸಿದರೆ ತಪ್ಪು ಎಂದು ಅಭಿಪ್ರಾಯಪಟ್ಟರು.
ನಗರದ ಮಲ್ಲೇಶ್ವರಂನಲ್ಲಿ ಪಕ್ಷದ ಕಚೇರಿ ಬಳಿ ನಡೆದ ಬಾಂಬ್ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನೀಡಿದ್ದ ನೋಟಿಸ್ಗೆ ಉತ್ತರ ನೀಡಲಾಗಿದೆ. ಇದರಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ನಿಶಾ ಪರಿಹಾರಕ್ಕಾಗಿ ಅರ್ಜಿ ಹಾಕಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಇದೇ 13ಕ್ಕೆ ಮಹಾಲಕ್ಷ್ಮಿ ಲೇಔಟ್ನಲ್ಲಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತದೆ. ಜುಲೈ 17ರಿಂದ ದಾಸರಹಳ್ಳಿಯಲ್ಲಿ ತರಬೇತಿ ಆರಂಭವಾಗಲಿದೆ. ಇದೇ ರೀತಿ ಪ್ರತಿ ತಿಂಗಳು ತರಬೇತಿ ನಡೆಸಲಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುವ ಯುವಕ-ಯುವತಿಯರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ಮಾಡಲು ಸಜ್ಜುಗೊಳಿಸಲಾಗುವುದು ಎಂದರು.