-ರಾಹುಲ ಬೆಳಗಲಿ
ಚಿಕ್ಕಬಳ್ಳಾಪುರ: ‘ಸ್ವಾಮಿ… ನನಗೆ ಮೂವರು ಹೆಂಡಿರು, 12 ಮಕ್ಕಳು. ಎಲ್ಲರೂ ಒಂದೇ ಮನೆಯಲ್ಲಿ ವಾಸ. ಒಬ್ಬ ಹೆಂಡತಿ ಮನೆ ನೋಡಿಕೊಂಡರೆ, ಮತ್ತೊಬ್ಬಳು ಕೂಲಿಗೆ ಹೋಗ್ತಾಳೆ. ಮೂರನೆಯವಳು ನನ್ನೊಂದಿಗೆ ದೇಶಾಂ ತರ ಬರುತ್ತಾಳೆ. ಹೋದ ಕಡೆಯಲ್ಲೆಲ್ಲ ಅಡುಗೆ ಮಾಡಿ, ನನಗೆ ಊಟ ಹಾಕ ಬೇಕಲ್ಲ. ನಿಮಗೆ ಯಾರ್್ಯಾರದ್ದು ಹೆಸರು ಬೇಕು? ಎಲ್ಲರಿಗೂ ಸೌಲಭ್ಯ ಕೊಡ್ತೀರಾ? ಮೂವರು ಹೆಂಡಿರ ಪಡಿತರ ಕಾರ್ಡ್ ಕೊಡ್ಲಾ’.
ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿ ವ್ಯಾಪ್ತಿಯ ನಂಜಯ್ಯಗಾರಹಳ್ಳಿ ಕುಗ್ರಾಮದಲ್ಲಿ ಯಾವುದೇ ಸಣ್ಣ ಮನೆಗೆ ಹೋಗಿ ಕುಟುಂಬದ ವಿವರಣೆ ಕೇಳಿದರೆ ಸಾಕು, ಮನೆಯೊಡೆಯನಿಂದ 3 ಕುಟುಂಬಗಳ ಜಾತಕ ಸಿಕ್ಕಿಬಿಡುತ್ತದೆ. ಮನೆ ಯಜಮಾನ ಹೀಗೆ ಮುಕ್ತ ಮಾಹಿತಿ ನೀಡುವುದ ರಿಂದಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ.
55 ಪ್ರಶ್ನೆ ಇರುವ ಗಣತಿ ಅರ್ಜಿಯಲ್ಲಿ ಒಂದೇ ಪಡಿತರ ಕಾರ್ಡ್ ದಾಖಲಿಸಲು ಮಾತ್ರ ಅವಕಾಶ. ಮೂವರು ಹೆಂಡತಿ ಯರು ಪ್ರತ್ಯೇಕವಾಗಿ ಹೊಂದಿ ರುವ ಮೂರು ಕಾರ್ಡ್ ವಿವರ ದಾಖಲಿಸು ವುದು ಹೇಗೆಂಬ ಪೀಕಲಾಟ ಅವರದ್ದು.
‘ನಂಜಯ್ಯಗಾರಹಳ್ಳಿ, ಸುತ್ತ ಲಿನ ಬಹುತೇಕ ಮಂದಿ ವಲಸೆ ಜನಾಂಗಕ್ಕೆ ಸೇರಿದ್ದು, ತಾತ್ಕಾಲಿಕ ಶೆಡ್, ಮನೆ ಮತ್ತು ಗುಡಿಸಲಿ ನಲ್ಲಿ ವಾಸವಿದ್ದಾರೆ. ಅವರ ಬಳಿ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವೂ ಇದೆ. ಕಾರ್ಡ್ ಗಳಲ್ಲಿನ ಅಂಕಿಗಳ ಸಹಿತ ಎಲ್ಲವನ್ನೂ ಪರಿಶೀಲಿಸಿ, ಎಲ್ಲರನ್ನೂ ಎಣಿಸಿ ಮಾಹಿತಿ ಬರೆದುಕೊಳ್ಳುವುದರಲ್ಲಿ ಸಾಕುಸಾಕಾಗುತ್ತದೆ’ ಎಂದು ಗಣತಿದಾರ ರೊಬ್ಬರು ತಿಳಿಸಿದರು.
ಸಮಸ್ಯೆ ಏನು?
ಮೂವರು ಹೆಂಡಂದಿರಿಗೆ ಒಬ್ಬನೇ ಗಂಡನಿದ್ದರೂ ಆತನ ಹೆಸರು ಒಂದು ಪಡಿತರ ಕಾರ್ಡ್ ನಲ್ಲಿ ಇರುತ್ತದೆ. ಇನ್ನೆರಡು ಕಾರ್ಡ್ ಗಳಲ್ಲಿ ಇರುವು ದಿಲ್ಲ. ಆತನ ಹೆಸ ರಿನ ಪಕ್ಕದಲ್ಲಿ ಬಹುಪತ್ನಿತ್ವ ಅಂತ ಬರೆಯ ಬಹುದು. ಆದರೆ ಆತನ ಹೆಸರಿಲ್ಲದ ಕಾರ್ಡ್ ಮತ್ತು ದೊರೆ ಯುತ್ತಿರುವ ಸೌಲಭ್ಯ ಬರೆದು ಕೊಳ್ಳಲು ಗಣತಿ ಪತ್ರದಲ್ಲಿ ಅವಕಾಶವಿಲ್ಲ. ಹೀಗಾಗಿ ಆ ಸೌಲಭ್ಯಗಳು ಲೆಕ್ಕಕ್ಕೆ ಬರುವುದೇ ಇಲ್ಲ’ ಎಂಬುದು ಗಣತಿದಾರರೊಬ್ಬರ ವಿವರಣೆ.