ಕರ್ನಾಟಕ

ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

Pinterest LinkedIn Tumblr

Farmers-06

ಬೆಂಗಳೂರು: ರಾಜ್ಯದ ಸಕ್ಕರೆ ಕಾರ್ಖಾ­ನೆ­­ಗಳಿಂದ ರೈತರಿಗೆ ಬರಬೇಕಿ­ರುವ ₨1,800 ಕೋಟಿ ಬಾಕಿ ಹಣ ಕೊಡಿ­ಸು­ವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಸೋಮ­ವಾರ ಪ್ರತಿಭಟನೆ ಮಾಡಿದರು.

ನಗರ ರೈಲು ನಿಲ್ದಾಣದಿಂದ ಬೆಳಿಗ್ಗೆ 11 ಗಂಟೆಗೆ ಜಾಥಾ ಪ್ರಾರಂಭಿಸಿದ ಪ್ರತಿ­ಭಟನಾಕಾರರು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೊರಟರು. ಸ್ವಾತಂತ್ರ್ಯ ಉದ್ಯಾನದ ಬಳಿ ಬ್ಯಾರಿ­ಕೇಡ್‌­ಗಳನ್ನು ಹಾಕಿಕೊಂಡಿದ್ದ ಪೊಲೀ­ಸರು ಅವರನ್ನು ಅಲ್ಲಿಯೇ ತಡೆ­ದಿದ್ದ­ರಿಂದ ಪೊಲೀಸರು ಮತ್ತು ಪ್ರತಿ­ಭ­ಟ­ನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿ­ಮ­ವಾಗಿ  ರಸ್ತೆ ಮಧ್ಯೆಯೇ ಧರಣಿ ಕುಳಿತರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರು­ಬೂರು ಶಾಂತಕುಮಾರ್, ‘54 ಕಾರ್ಖಾನೆಗಳು ಕಳೆದ ವರ್ಷ ₨1,800 ಕೋಟಿ ಬಾಕಿ ಉಳಿಸಿ­ಕೊಂ­ಡಿವೆ. ಪಾವತಿಗೆ ಕೂಡಲೇ ಕ್ರಮ ಕೈಗೊ­ಳ್ಳು­ವಂತೆ ಹೈಕೋರ್ಟ್ ಕಳೆದ ನವೆಂ­ಬರ್‌ನಲ್ಲಿ ಆದೇಶ ಹೊರಡಿಸಿತ್ತು. ಆ ನಂತರ ನೆಪ ಮಾತ್ರಕ್ಕೆ ನೋಟಿಸ್ ಜಾರಿ­ಗೊಳಿಸಿದ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀ­ಕರ ಒತ್ತಡಕ್ಕೆ ಮಣಿದು ರೈತ­ರನ್ನು ವಂಚಿಸಿದೆ’ ಎಂದರು.

ಸಂಜೆ ಸ್ಥಳಕ್ಕೆ ಬಂದ ಗೃಹ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಸಕ್ಕರೆ ಸಚಿವ ಮಹದೇವ ಪ್ರಸಾದ್, ‘ಬಾಕಿ ಹಣ ಕೊಡಿಸುವ ಸಂಬಂಧ ಮುಖ್ಯಮಂತ್ರಿ­ಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾ­ಗು­ವುದು’ ಎಂದರು. ಇದಕ್ಕೆ ಪ್ರತಿ­ಭ­ಟ­ನಾ­ಕಾರರು, ‘ಬೇಡಿಕೆ ಈಡೇರಿ­ಸುವು­ದಾಗಿ ಮುಖ್ಯಮಂತ್ರಿ­ಗಳು ಬೆಳಗಾವಿ ಅಧಿ­ವೇಶನದಲ್ಲೇ ಭರವಸೆ ಕೊಟ್ಟಿ­ದ್ದರು. ಆದರೆ, ಈಗ ಅವರು ಮಾತು ತಪ್ಪಿ­ದ್ದಾರೆ. ಲಿಖಿತ ಭರವಸೆ ಬೇಕು’ ಎಂದು ಪಟ್ಟು ಹಿಡಿದರು.

ಮತ್ತೊಮ್ಮೆ ವಾಗ್ವಾದ: ಕಬ್ಬು ಬೆಳೆಗಾ­ರರು ಅಹೋರಾತ್ರಿ ಮುಷ್ಕರ ನಡೆಸಲು ನಿರ್ಧರಿಸಿದ್ದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ರಾತ್ರಿ ಮತ್ತೆ ವಾಗ್ವಾದ ನಡೆಯಿತು. ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚು­ವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್, ಪ್ರತಿಭಟನಾ ಕಾರರ ಮನ­ವೊಲಿಸು­ವಲ್ಲಿ ಯಶಸ್ವಿಯಾದರು.

Write A Comment